ಮಂತ್ರಿ ಸ್ಥಾನ; ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ-ರಮೇಶ ಜಾರಕಿಹೊಳಿ

Advertisement

ಬೆಳಗಾವಿ: ಸಿಎಂ ಬೊಮ್ಮಾಯಿ ಹೇಳಿದಂತೆ ಅಧಿವೇಶನಕ್ಕೆ ಹಾಜರಾಗಿದ್ದೇವೆ. ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿ ಸ್ಥಾನ ವಿಚಾರವಾಗಿ ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ನಮಗೆ ಯಾವುದೇ ನಿರೀಕ್ಷೆ ಇಲ್ಲ ಎಂದರು.
ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ. ಸಿಎಂ ಜೊತೆಗಿನ ಮಾತುಕತೆ ವಿಷಯವನ್ನು ಬಹಿರಂಗ ಪಡಿಸಲು ಆಗಲ್ಲ. ಸಿಎಂ ಮೇಲೆ ನಮಗೆ ಅಪಾರ ಗೌರವವಿದೆ ಎಂದು ಹೇಳಿದರು.
ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಮಂತ್ರಿ ಆಗ್ತೀವೊ, ಬಿಡ್ತೀವೋ ಬೇರೆ ವಿಷಯ, ಜಿಲ್ಲೆಯಲ್ಲಿ ಕೆಲಸವಾಗಬೇಕು. ವಿಶೇಷವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹಿಂಡಲಗಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಅವರು ಆರಂಭಿಸಿರುವ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ರಮೇಶ ಜಾರಕಿಹೊಳಿ, ನಾಗೇಶ ಮನ್ನೋಳ್ಕರ್ ಅವರನ್ನು ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಬೇಕೆಂದು ದೆಹಲಿವರೆಗೂ ಕರೆದುಕೊಂಡು ಹೋಗಿ ಬಂದಿದ್ದೇನೆ. ಒಂದು ವೇಳೆ ಪಕ್ಷ ಬೇರೆಯವರನ್ನು ನಿಲ್ಲಿಸಿದರೂ ಅವರ ಪರವಾಗಿಯೇ ಕೆಲಸ ಮಾಡುತ್ತೇನೆ. ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದರು.
ಇಂದಿನಿಂದಲೇ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಕೆಲಸ ಆರಂಭವಾಗಿದೆ ಎಂದೂ ಅವರು ಹೇಳಿದರು.