ಮಗನಿಂದ ತಂದೆ ಕೊಲೆ

ಕೊಲೆ
Advertisement

ಬೈಲಹೊಂಗಲ(ಬೆಳಗಾವಿ): ತಂದೆಯಿಂದ ಹಲ್ಲೆಗೊಳಗಾದ ತಾಯಿಯ ಚಿಕಿತ್ಸೆಗೆ ಮುಂದಾದ ಮಗನೊಂದಿಗೆ ಜಗಳ ತೆಗೆದ ತಂದೆಯನ್ನೇ ಮಗನು ಮಚ್ಚಿನಿಂದ ಕೊಲೆ ಮಾಡಿದ ಘಟನೆ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಮಂಗಳವಾರ ತಡ ರಾತ್ರಿ ನಡೆದಿದೆ.
ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದ ರುದ್ರಪ್ಪ ತಳವಾರ(55) ಹಾಗೂ ಪತ್ನಿ, ಮಲ್ಲೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಮಹಾದೇವಿ(50) ಮಧ್ಯೆ ಜಗಳ ನಡೆದು ಮಹಾದೇವಿಗೆ ಬಲವಾಗಿ ಹೊಡೆದಿದ್ದರಿಂದ ಕಣ್ಣಿನ ಭಾಗದಲ್ಲಿ ಬಲವಾದ ಗಾಯವಾಗಿತ್ತು. ಮಗ ಸಂತೋಷ ಇಬ್ಬರ ಜಗಳ ಬಿಡಿಸಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ತನ್ನ ಬಳಿಯ ಹಣದಲ್ಲಿ ಔಷಧೋಪಚಾರ ಮಾಡಿಸಿ, ಸ್ಕ್ಯಾನಿಂಗ್‌ಗಾಗಿ ಮನೆಗೆ ಹಣ ತರಲು ಬಂದಾಗ, ಕುಡಿದ ಅಮಲಿನಲ್ಲಿದ್ದ ತಂದೆ ಅವಳಿಗೆ ಚಿಕಿತ್ಸೆ ಕೊಡಿಸಬೇಡ ಎಂದು ಜಗಳವಾಡಿದಾಗ, ಮಾತಿಗೆ ಮಾತು ಬೆಳೆದು ಇಬ್ಬರು ಕೈ, ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಸಂತೋಷ ಸಿಟ್ಟಿನ ಭರದಲ್ಲಿ ಮಚ್ಚಿನಿಂದ ತಂದೆ ರುದ್ರಪ್ಪನ ಕುತ್ತಿಗೆ, ಕಣ್ಣಿಗೆ ಏಟು ಹಾಕಿದ್ದರಿಂದ ಸ್ಥಳದಲ್ಲೇ ರುದ್ರಪ್ಪ ಮೃತಪಟ್ಟಿದ್ದಾನೆ. ಆರೋಪಿ ಸಂತೋಷನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.