ಮದುವೆಗೆ ಹೆಣ್ಣು ಸಿಗದೆ ಆತ್ಮಹತ್ಯೆ ಮಾಡಿಕೊಂಡ ಯಲ್ಲಾಪುರದ ಯುವಕ

Advertisement

ಕಾರವಾರ: ಗುಡ್ಡಗಾಡು ಪ್ರದೇಶ ಹಾಗೂ ಕೃಷಿಯನ್ನೆ ಅವಲಂಬಿಸಿರುವ ಉತ್ತರಕನ್ನಡ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಆರೋಪ‌ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ ಇಂತಹ ವಿಚಾರದಿಂದಲೇ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರದ ತೇಲಂಗಾರದ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಯಲ್ಲಾಪುರದ ತೇಲಂಗಾರ ಕಿರಗಾರಿಮನೆಯಲ್ಲಿ ಕೃಷಿ ಮಾಡಿಕೊಂಡಿದ್ದ ಈತ ಮದುವೆಯಾಗಲು ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದ. ಮದುವೆಯಾಗಲೂ ಸಾಕಷ್ಟು ಹುಡುಕಾಟ ನಡೆಸಿದರು ಕೂಡ ಎಲ್ಲಿಯೂ ಸಂಬಂಧ ಹೊಂದಿಕೆಯಾಗಿರಲಿಲ್ಲ.
ಅಲ್ಲದೆ ಮದುವೆಗಾಗಿ ಸಂಬಂಧಿಕರು, ಬ್ರೋಕರ್‌ಗಳ ಬಳಿ ಹೆಣ್ಣು ಹುಡುಕಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದರು ಅದರಿಂದಲೂ ಸಾಧ್ಯವಾಗಿರಲಿಲ್ಲ. ಇದರಿಂದ ನಾಗರಾಜ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿದ್ದ. ಇಂದು ಆತನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.