ಮಹಾರಾಷ್ಟ್ರದಲ್ಲಿ ಮಹಾ ಮಳೆ: ಬೆಳಗಾವಿ ಜಿಲ್ಲೆಗೆ ಪ್ರವಾಹದ ಭೀತಿ

Advertisement

ಬೆಳಗಾವಿ : ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಧಾರಕಾರ ಮಳೆಗೆ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯ ಅರ್ಭಟ ಮುಂದೆವರೆದ ಹಿನ್ನೆಲೆ ಜಿಲ್ಲೆಯಲ್ಲಿ ಮತ್ತೆ ನದಿಗಳಲ್ಲಿ ಪ್ರವಾಹದ ಬೀತಿ ಎದುರಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕ ಐದು ದಿನಗಳಿಂದ ಎಡೆಬಿಡದೆ ಮಳೆಯ ಧಾರಾಕಾರವಾಗಿ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನದಿಗಳಾದ ಕೃಷ್ಣ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿವೆ.
ಅದರಂತೆ ಇಂದು ಬೆಳಿಗ್ಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ ಮತ್ತು ಭೀವಂಶಿ ನಡುವಿನ ಸೇತುವೆ ಮೇಲೆ ಒಂದು ಅಡಿ ನೀರು ಹರಿಯುತ್ತಿದ್ದು, ಇಲ್ಲಿ ನಾಗರಿಕರು ಸಂಚರಿಸದಂತೆ ಪೊಲೀಸ ಬಂದೋಬಸ್ತ ಮಾಡಲಾಗಿದೆ.
ಅದರಂತೆ ಕಾಗವಾಡ ತಾಲೂಕಿನ ರಾಜಾಪೂರ ಮಂಗಾವತಿ ನಡುವಿನ ಸೇತುವೆ ಮೇಲೆ ನೀರು ಹರಿಯುತ್ತಿದೆ. ಅದೇ ರೀತಿ ಗೋಕಾಕ ತಾಲೂಕಿನ ಗೋಕಾಕ ಮತ್ತು ಸಿಂಗಳಾಪೂರ ನಡುವಿನ ಸೇತುವೆ ಜಲಾವೃತ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಜಿಲ್ಲೆಯಾದ್ಯಂತ 83 ಸೇತುವೆಗಳ ಮೇಲೆ ಜಿಲ್ಲಾ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ನದಿಗಳಷ್ಟೇ ಅಲ್ಲ, ಅನೇಕ ಹಳ್ಳಗಳನ್ನೂ ವೀಕ್ಷಿಸಲಾಗುತ್ತಿದೆ ಎಂದರು.
ರಸ್ತೆ ಮಟ್ಟದವರೆಗೆ ನೀರು ಏರುವುದು ಕಂಡುಬಂದಲ್ಲಿ ಸೇತುವೆಗಳನ್ನು ಬಳಸದಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.