ಮಾಜಿ ಸಚಿವ ರೇಣುಕಾಚಾರ್ಯಗೆ ಕೊಲೆ ಬೆದರಿಕೆ

ರೇಣುಕಾಚಾರ್ಯ
Advertisement

ದಾವಣಗೆರೆ: ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಪುತ್ರನಿಗೆ ಎರಡು ಪ್ರತ್ಯೇಕ ನಂಬರ್‌ಗಳಿಂದ ಪ್ರಾಣ ಬೆದರಿಕೆ ಕರೆಗಳು ಬಂದ ಘಟನೆ ಸೋಮವಾರ ನಡೆದಿದ್ದು, ತಮ್ಮ ಬೆಂಬಲಿಗರೊಂದಿಗೆ ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ, ತಮಗೆ ಕರೆ ಬಂದ ಮೊಬೈಲ್‌ ನಂಬರ್‌ಗಳ ಸಮೇತ ರೇಣುಕಾಚಾರ್ಯ ದೂರು ದಾಖಲಿಸಿದ್ದಾರೆ.
ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮೊಬೈಲ್‌ಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು ಸೋಮವಾರ ರಾತ್ರಿ ಒಳಗಾಗಿ ನಿನಗೆ ಹಾಗೂ ನಿನ್ನ ಮಗನನ್ನು ಸೋಮವಾರ ರಾತ್ರಿಯೇ ಕೊಲೆ ಮಾಡುವ ಬೆದರಿಕೆ ಹಾಕಿದ್ದು, ಈ ಬಗ್ಗೆ ರೇಣುಕಾಚಾರ್ಯ ಕುಟುಂಬ ಆತಂಕಕ್ಕೆ ಒಳಗಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ, ನ್ಯಾಮತಿಯಲ್ಲಿ ತಾವು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಮವಾರ ಬೆಳಿಗ್ಗೆಯಿಂದ ತೊಡಗಿದ್ದೆ. ಮಧ್ಯಾಹ್ನ 12.52ಕ್ಕೆ ನ್ಯಾಮತಿಗೆ ಹೋಗಿದ್ದಾಗ ನನಗೆ ಅಂತಾರಾಷ್ಟ್ರೀಯ ಕರೆ ಬಂದಿತು. ಮಿಸ್ಡ್ ಕಾಲ್ ಆಗಿದ್ದರಿಂದ ನಾನು ಕರೆ ಸ್ವೀಕರಿಸಲಿಲ್ಲ. ಮತ್ತೆ 12.53ಕ್ಕೆ ಕರೆ ಬಂದಿತು. ಆಗ ಕನ್ನಡದಲ್ಲೇ ಮಾತನಾಡಿದ ಅಪರಿಚಿತ ವ್ಯಕ್ತಿಯು ಇವತ್ತೇ ನಿನಗೆ ಕೊನೆಯ ದಿನ. ನಿನ್ನ ಮಗನಿಗೂ ಮುಗಿಸುತ್ತೇನೆಂಬುದಾಗಿ ಬೆದರಿಕೆ ಹಾಕಿದ ಎಂದು ದೂರಿದರು.
ನಂತರ ಯಾರೋ ನೀನು ಎಂಬುದಾಗಿ ನಾನು ಪ್ರಶ್ನಿಸಿದೆ. ತಕ್ಷಣ ಅಪರಿಚಿತ ವ್ಯಕ್ತಿಯು ಕರೆ ಕಟ್ ಮಾಡಿದ್ದಾನೆ. ಎರಡೂ ಕರೆಗಳ ಪೈಕಿ ಒಂದು ಕರೆಯನ್ನು ಮಲೇಷ್ಯಾದಿಂದ ಮಾಡಿದ್ದು ಎಂಬ ಮಾಹಿತಿ ಇದೆ. ಇನ್ನೊಂದು ಕರೆ ಎಲ್ಲಿಂದ ಬಂದಿದ್ದೆಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನ್ಯಾಮತಿ, ಹೊನ್ನಾಳಿ ಸಿಪಿಐಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದೇನೆ. ಹೀಗೆ 2 ವರ್ಷದ ಹಿಂದೆಯೂ ಬೆಂಗಳೂರಿನಲ್ಲಿದ್ದಾಗ ಇದೇ ರೀತಿಯ ಕರೆ ಬಂದಿತ್ತು. ಆಗ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಈಗ ಮತ್ತೆ ನ್ಯಾಮತಿ, ಹೊನ್ನಾಳಿಯ ಠಾಣೆಗೆ ದೂರು ನೀಡಲಿದ್ದೇನೆ ಎಂದು ಅವರು ತಿಳಿಸಿದರು.
ಹಿಂದಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತವೇ ಇವೆ. ಕಳೆದ 15-20 ವರ್ಷದಿಂದಲೂ ನನಗೆ ಬೆದರಿಕೆ ಇದ್ದೇ ಇದೆ. ಹಿಂದೆಲ್ಲಾ ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ನೇರಾ ನೇರವಾಗಿ ಅಟ್ಯಾಕ್ ಮಾಡಿದರು. ಶಾಮಿಯಾನಕ್ಕೆ ಬೆಂಕಿ ಹಾಕಿದರು. ವಾಹನಕ್ಕೆ ಧಕ್ಕೆ ಮಾಡಿದರು. ರಾಜಕಾರಣದಲ್ಲಿರುವ ನಾನು ಇಂತಹದ್ದಕ್ಕೆಲ್ಲಾ ಹೆದರಲ್ಲ, ಜಗ್ಗಲ್ಲ, ಬಗ್ಗಲ್ಲ. ಹೊನ್ನಾಳಿ, ನ್ಯಾಮತಿ ತಾಲೂಕಿನ ಜನತೆ ನನ್ನ ರಕ್ಷಣೆ ಮಾಡಿದ್ದಾರೆ, ರಾತ್ರೋರಾತ್ರಿ ನನ್ನ ರಕ್ಷಣೆಗೆ ಮುಖಂಡರು. ಕಾರ್ಯಕರ್ತರು ನಿಂತಿದ್ದಾರೆ. ನನ್ನ ರಕ್ಷಣೆಗೆ ಎಲ್ಲರೂ ಇದ್ದಾರೆ ಎಂದರು.