ಯಮಸಲ್ಲೇಖನ ವ್ರತದಲ್ಲಿದ್ದ ಧೈರ್ಯಮತಿ ಮಾತಾಜಿ ಜಿನೈಕ್ಯ

ಧೈರ್ಯಮತಿ ಮಾತಾಜಿ
Advertisement

ಬೆಳಗಾವಿ: ನಗರದ ಶಹಾಪುರ ಕೋರೆ ಗಲ್ಲಿಯ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ 11 ದಿನಗಳಿಂದ ಯಮಸಲ್ಲೇಖನ ವ್ರತ ಕೈಗೊಂಡಿದ್ದ 105 ಧೈರ್ಯಮತಿ ಮಾತಾಜಿ(94) ಅವರು ಬುಧವಾರ ರಾತ್ರಿ 9.21ಕ್ಕೆ ದೇಹ ತ್ಯಾಗ ಮಾಡಿ ಜಿನೈಕ್ಯರಾದರು.

11 ದಿನಗಳ ಹಿಂದೆ ಪುಣ್ಯಸಾಗರ ಮಹಾರಾಜರು, ಪುರಾಣ ಸಾಗರ ಮಹಾರಾಜರು ಹಾಗೂ ಪ್ರಸನ್ನ ಸಾಗರ ಮಹಾರಾಜರ ಅವರ ಮಾರ್ಗದರ್ಶನದಲ್ಲಿ ಧೈರ್ಯಮತಿ ಮಾತಾಜಿ ಸಲ್ಲೇಖನ ವ್ರತ ಕೈಗೊಂಡಿದ್ದರು. ನೀರು, ಆಹಾರ ತ್ಯಜಿಸಿ ವೃತ ಆರಂಭಿಸಿದ್ದರು.

ಪದ್ಮಾವತಿ ಇಜಾರೆ ಎಂಬ ಮೂಲ‌ ಹೆಸರಿನವರಾದ ಮಾತಾಜಿ ಗ್ರಹಸ್ಥರಾಗಿದ್ದರು. ಮೊದಲಿನಿಂದಲೂ ಜೈನ ಧರ್ಮ ಸಂಪ್ರದಾಯ, ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದರು. 11 ಸಲ‌ ಸಮ್ಯೇದಸಿಖರಜೀ ಯಾತ್ರೆ ಕೈಗೊಂಡಿದ್ದರು. ಚಾತುರ್ಮಾಸವನ್ನು ಆಚರಿಸಿಕೊಂಡು ಬಂದಿದ್ದರು. 11 ದಿನಗಳ ಹಿಂದೆ ವ್ರತ ಕೈಗೊಂಡಾಗ 105 ಧೈರ್ಯಮತಿ ಮಾತಾಜಿ ಎಂದಾದರು.

ಧೈರ್ಯಮತಿ ಮಾತಾಜಿಯ ಅಂತ್ಯಸಂಸ್ಕಾರ ನಗರದ ಮಾಣಿಕಬಾಗ್ ಬೋರ್ಡಿಂಗ್‌ನಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಅಂತಿಮಯಾತ್ರೆ ಆರಂಭವಾಗಿ 10.30ಕ್ಕೆ ಅಂತ್ಯಸಂಸ್ಕಾರ ನೆರವೇರಿತು.