ರಕ್ಷಿತ್ ಶೆಟ್ಟಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಭೇಟಿ

Advertisement

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ವಿಜಯ ಯಾತ್ರೆ ಅಂಗವಾಗಿ ನಾಳೆ ಹುಬ್ಬಳ್ಳಿಯ ಅರ್ಬನ್ ಒಯಾಸಿಸ್ ಮಾಲ್‌ನ ಸಿನಿಪೊಲೀಸ್‌ಗೆ ಬೆಳಿಗ್ಗೆ 9:50ರ ಶೋ, ಧಾರವಾಡನ ಸಿಟಿ ಮಾಲ್ ಐನಾಕ್ಸ್ಗೆ 12:00 ಗಂಟೆ ಶೋ ಹಾಗೂ ಬೆಳಗಾವಿ ಕಪೀಲ್ ನ್ಯೂಕ್ಷಿಯಸ್ ಮಾಲ್‌ಗೆ 3:30 ಶೋನಲ್ಲಿ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್ ಹಾಗೂ ನಿರ್ದೇಶಕ ಹೇಮಂತ ರಾವ್ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಕ್ಲಾಸ್ ಲವ್ ಸ್ಟೋರಿಯನ್ನು ಹೊತ್ತು ತಂದಿದ್ದು, ಎಲ್ಲಾ ಪ್ರೇಕ್ಷಕರ ಮನಸನ್ನು ಗೆದ್ದಿದೆ. ಈಗಾಗಲೇ ಮಂಡ್ಯ, ಮೈಸೂರು, ಹಾಸನ, ಉಡುಪಿ, ಮಣಿಪಾಲ್ ಕುಂದಾಪುರ, ಮಂಗಳೂರು ಹಾಗೂ ಶಿವಮೊಗ್ಗನಲ್ಲಿ ವಿಜಯ ಯಾತ್ರೆ ಯಶಸ್ವಿಯಾಗಿ ನಡೆದಿದೆ.
ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನೇರವಾಗಿ ಪ್ರೇಕ್ಷಕರ ಹತ್ತಿರ ಬಂದು ತಮ್ಮ ಸಿನಿಮಾ ಬಗ್ಗೆ ಸಂವಾದ ನಡೆಸುವ ರಕ್ಷಿತ್ ಶೆಟ್ಟಿ, ‘ಅವನೇ ಶ್ರೀಮನ್ನಾರಾಯಣ’, ‘777 ಚಾರ್ಲಿ’ ಪ್ರದರ್ಶನದ ಸಂದರ್ಭದಲ್ಲೂ ರಾಜ್ಯಾದ್ಯಂತ ಸುತ್ತಿ ಜನರೊಂದಿಗೆ ಸಂವಾದ ನಡೆಸಿದ್ದರು. ಅದೇ ರೀತಿ ಈಗ ಹೊಸ ನಿರೂಪಣಾ ಶೈಲಿಯಲ್ಲಿ ಮೂಡಿ ಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಮೂರನೇ ದಿನದ ವಿಜಯ ಯಾತ್ರೆಯ ಅಂಗವಾಗಿ ಉಡುಪಿ, ಮಣಿಪಾಲ, ಕುಂದಾಪುರಕ್ಕೆ ಬರಲಿದ್ದಾರೆ. ಸದ್ಯ ಥಿಯೇಟರ್‌ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮುಂದುವರೆದ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆ ಮಾಡುವುದಾಗಿ ತಂಡ ಈಗಾಗಲೇ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿ, ಪರಂವಾಃ ಪಿಕ್ರ‍್ಸ್ ಪ್ರೋಡಕ್ಷನ್ಸ್ ಮೂಲಕ ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯತ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಇದ್ದಾರೆ.