ರಮೇಶ ಕತ್ತಿ ಬರೋದಾದ್ರೆ ಹೈಕಮಾಂಡ್ ಗಮನಕ್ಕೆ ತರುವೆ

ಲಕ್ಷಣ ಸವದಿ
Advertisement

ಚಿಕ್ಕೋಡಿ: ಕಾಲ ಸಮೀಪಕ್ಕೆ ಬರಲಿ, ಇನ್ನೂ ಕಾಲ ಪಕ್ವವಾಗಿಲ್ಲ. ಕಾಲ ಪಕ್ವವಾದ ಮೇಲೆ ಯಾವ್ಯಾವ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬರ್ತಾರೆ, ಅಭ್ಯರ್ಥಿಗಳಾಗ್ತಾರೆ ಗೊತ್ತಾಗುತ್ತದೆ ಎಂದು ಮಾಜಿ ಡಿಸಿಎಂ, ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ಕತ್ತಿ ರಾಜಕಾರಣ ನಿಂತ ನೀರಲ್ಲ ಎಂಬ ಮಾತು ಹೇಳಿದ್ದಾರೆ. ನಮ್ಮ ಮನೆಗೆ ಬಂದು ಟೀ ಕುಡಿದು ಹೋಗಿದ್ದಾರೆ. ಆಗ ಮಾಧ್ಯಮದವರು ಚುನಾವಣೆಯಲ್ಲಿ ಏನ್ ಮಾಡ್ತೀರಿ ಅಂತಾ ಕೇಳಿದ್ರು. ಆಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದಿದ್ದೀನಿ, ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ರಮೇಶ್ ಕತ್ತಿ ತಿಳಿಸಿದ್ರು. ಬಿಜೆಪಿ ಮುಖಂಡರು ರಮೇಶ್ ಕತ್ತಿಗೆ ಟಿಕೆಟ್ ಕೊಡ್ತಾರೋ ಅಣ್ಣಾಸಾಹೇಬ್ ಜೊಲ್ಲೆಗೆ ಕೊಡ್ತಾರೋ ನನಗೆ ಗೊತ್ತಿಲ್ಲ. ಏನ್ ಆಗುತ್ತೆ ನೋಡಿ ಜಿಲ್ಲೆಯ ಎಲ್ಲ ಹಿರಿಯರ ಜೊತೆ
ಮಾತನಾಡಿ ತೀರ್ಮಾನ ಮಾಡ್ತೀನಿ ಎಂದು ರಮೇಶ್ ಕತ್ತಿ ಹೇಳಿದ್ದಾರೆ ಎಂದರು.
ನಮ್ಮದು ರಾಷ್ಟ್ರೀಯ ಪಕ್ಷ, ನಾನೇನು ಪಕ್ಷದ ಅಧ್ಯಕ್ಷನಲ್ಲ. ಆ ರೀತಿ ಹೇಳಿಕೆ ನೀಡುವ ಜವಾಬ್ದಾರಿಯೂ ಇಲ್ಲ. ಅವರೇನಾದರೂ ಬರೋದಾದ್ರೆ ಆ ವಿಚಾರವನ್ನು ಪಕ್ಷದ ಹಿರಿಯರಿಗೆ ಹೇಳಿ
ಮನವೊಲಿಸುವ ಮಾಡುವ ಕೆಲಸ ಮಾಡುತ್ತೇನೆ ಎಂದು ರಮೇಶ ಕತ್ತಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸವದಿ ಪ್ರತಿಕ್ರಿಯಿಸಿದರು.