ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರೀ ಅನುಮಾನ ಹುಟ್ಟುಹಾಕುವಂತೆ ಮಾಡಿದೆ.
ರೇಣುಕಾಚಾರ್ಯರ ಸಹೋದರ ಎಂ.ಪಿ. ರಮೇಶ್ ಪುತ್ರ ಚಂದ್ರು ಅಲಿಯಾಸ್ ಚಂದ್ರಶೇಖರ್ (26) ನಾಪತ್ತೆಯಾದವರು.
ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಇದ್ದಕ್ಕಿದಂತೆ ಭಾನುವಾರ ಹೋದವರು ಇನ್ನೂ ಪತ್ತೆಯಾಗಿಲ್ಲದೇ ಇರುವುದು ಭಾರೀ ಅನುಮಾನ ಹುಟ್ಟುಹಾಕಿದೆ.
ಅಸಲಿಗೆ ಚಂದ್ರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು, ಯಾವುದೇ ದುಶ್ಚಟಗಳು ಇರಲಿಲ್ಲ, ಯಾರೊಂದಿಗೂ ದ್ವೇಷವನ್ನೂ ಕಟ್ಟಿಕೊಂಡಿರಲಿಲ್ಲ ಎನ್ನುತ್ತಾರೆ ಅವರನ್ನು ಬಲ್ಲವರು. ಆದರೂ ಚಂದ್ರು ನಾಪತ್ತೆಯ ಪ್ರಕರಣ ಅದ್ಯಾವ ತಿರುವು ಪಡೆಯುವುದೋ ಕಾದುನೋಡಬೇಕಿದೆ.