ರೈಲಿನಲ್ಲಿ ಪ್ರಯಾಣಿಕನಿಗೆ ಹಾವು ಕಡಿತ, ಆಸ್ಪತ್ರೆಗೆ ದಾಖಲು

Advertisement

ಕೊಟ್ಟಾಯಂ: ಮಧುರೈ-ಗುರುವಾಯೂರ್ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಹಾವು ಕಚ್ಚಿದೆ. ಮಧುರೈ ಮೂಲದ ಕಾರ್ತಿಕ್ ಸೋಮವಾರ ಬೆಳಗ್ಗೆ ತನ್ನ ಊರಿಗೆ ಈ ರೈಲಿನ ಆರನೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಾವು ಕಚ್ಚಿದೆ. ಹೀಗಾಗಿ ಎಟ್ಟುಮನೂರು ರೈಲು ನಿಲ್ದಾಣದಲ್ಲಿ ಆತನನ್ನು ಇಳಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸನದ ಅಡಿಯಿಂದ ಬಂದು ಕಾರ್ತಿಕ್‌ಗೆ ಹಾವು ಕಚ್ಚಿದ್ದರೂ ಅವರು ಗಂಭೀರ ಸ್ವರೂಪದ ಗಾಯಗೊಂಡಿಲ್ಲ. ಅವರ ದೇಹಸ್ಥಿತಿ ಸ್ಥಿರವಾಗಿದೆ. ಹಾವು ಕಚ್ಚಿದ ಘಟನೆ ತಿಳಿದ ಕೂಡಲೇ ಎಟ್ಟುಮನೂರು ರೈಲುನಿಲ್ದಾಣದಲ್ಲಿ ೧೦ ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿದೆ. ಸೀಟಿನ ಕೆಳಗೆ ಹಾವು ಓಡಾಡಿದ್ದನ್ನು ನೋಡಿರುವುದಾಗಿ ಸಹ ಪ್ರಯಾಣಿಕರೂ ತಿಳಿಸಿದ್ದಾರೆ.