ಲೋಕಾಯುಕ್ತದಿಂದ ಶಾಸಕರ ಪುತ್ರನ ಬಂಧನ: ನಿಷ್ಪಕ್ಷಪಾತ ತನಿಖೆಯಾಗಲಿದೆ

BASAVARAJ BOMAI
Advertisement

ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ನನ್ನು ಲೋಕಾಯುಕ್ತ ಬಂಧಿಸಿರುವ ಪ್ರಕರಣದಲ್ಲಿ, ನಿಷ್ಪಕ್ಷಪಾತವಾಗಿ ತನಿಖೆಯಾಗಲಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎನ್ನುವುದು ನಮ್ಮ ನಿಲುವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನನ್ನು ಮೇಲೆ ಲೋಕಾಯುಕ್ತ ಬಂಧಿಸಿರುವ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನು ಮುಕ್ತವಾಗಿ ನಿಗ್ರಹಿಸಬೇಕು ಎಂದು. ಲೋಕಾಯುಕ್ತ ಇಲ್ಲದೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿದೆ. ನಿಷ್ಪಕ್ಷಪಾತವಾಗಿ ತನಿಖೆಯಾಗಲಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿಗಳು, ಈ ವಿಚಾರದಲ್ಲಿಯೂ ಸಹ ಲೋಕಾಯುಕ್ತ ಸರ್ವ ಸ್ವತಂತ್ರವಾಗಿರುವ ಸಂಸ್ಥೆ ಮಾಹಿತಿ ಹಾಗೂ ಹಣ ದೊರೆತಿರುವುದರ ಮೇಲೆ ಲೋಕಾಯುಕ್ತ ಮುಕ್ತವಾಗಿ, ನಿಷ್ಪಕ್ಷಪಾತವಾದ ತನಿಖೆ ಮಾಡಲಿದೆ. ಹಣ ಯಾರಿಗೆ ಸೇರಿದ್ದು ಯಾರಿಗೋಸ್ಕರ ಆಗಿದ್ದು ಎನ್ನುವುದೆಲ್ಲಾ ಹೊರಬರಬೇಕು. ಸತ್ಯ ಹೊರಗಡೆ ಬರಲಿ ಎನ್ನುವುದು ನಮ್ಮ ಉದ್ದೇಶ.ಯಾರು ತಪ್ಪು ಮಾದಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎನ್ನುವುದು ನಮ್ಮ ಅಭಿಪ್ರಾಯ ಎಂದರು.
ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ
ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರ ಮೇಲೆ 59 ಆರೋಪವಿತ್ತು. ಅವರ ಮಂತ್ರಿಗಳ ಮೇಲೆ ಇತ್ತು. ಎಸಿಬಿ ಇದದ್ದಕ್ಕೆ ಅವರು ಪ್ರಕರಣ ಮುಚ್ಚಿಹಾಕಿದರು. ಈಗ ಲೋಕಾಯುಕ್ತ ತನಿಖೆಯಾದಾಗ ಅವರದ್ದು ಸಹ ಹೊರಗಡೆ ಬರುತ್ತೆ.
ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿಹಾಕಿರೋದಕ್ಕೆ ಇದೇ ಸಾಕ್ಷಿ ಇವೆಲ್ಲ ಬಹಿರಂಗವಾಗಲಿದೆ. ನಾವು ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಹಳ ಸ್ಪಷ್ಟವಾಗಿ ಮಾಜಿ ಮಂತ್ರಿ ಜಾರ್ಜ್ ಅವರು ಎಸಿಬಿನೇ ಮುಂದುವರಿಸಿ ಎಂದು ವಿಧಾನಸಭೆಯಲ್ಲಿ ಹೇಳ್ತಾರೆ. ಅವರು ಯಾರ ಪರವಾಗಿದ್ದಾರೆ ಎಂದು ಪ್ರಶ್ನಿಸಿದ ಸಿಎಂ, ಈಗ ಈ ಘಟನೆ ಇಟ್ಟುಕೊಂಡು ತಾವು ದೊಡ್ಡ ಸ್ವಚ್ಛ ಪಕ್ಷ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವರು ಬಹಳ ಹಿಂದೆಯೂ ಭ್ರಷ್ಟಾಚಾರ ಮಾಡಿದ್ದಾರೆ. ಹಲವಾರು ಜನರ ಮೇಲೆ ಪ್ರಕರಣ ಸಹ ದಾಖಲಾಗಿದೆ. ತನಿಖೆ ಸಹ ಆಗುತ್ತಿದೆ ಅವರು ಮುಚ್ಚಿ ಹಾಕಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸಲಾಗುವುದು ಎಂದರು.
ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣ ಕೂಡ ತನಿಖೆಯಾಗಲಿದೆ
ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು