ಬೆಳಗಾವಿ: ಕೊರೊನಾ ಸಂದರ್ಭದಲ್ಲಿ ಓಡಿ ಹೋಗಿ ಈಗ ಬೇರೆ ಬೇರೆ ವೇಷ ತೊಟ್ಟು ಬರುವವರನ್ನು ಮತದಾರರೇ ಪ್ರಶ್ನೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ವಾರ್ಡ್ ನಂಬರ್ 43ರಲ್ಲಿ ಬರುವ ಎಸ್ ವಿ.ರಸ್ತೆಯಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೊರೊನಾ ಮಹಾಮಾರಿ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರ ಮನೆಗೆ ಹಾಲು ಪೂರೈಕೆ ಮಾಡುವುದು ಸೇರಿದಂತೆ ಪ್ರತಿಯೊಂದು ಗಲ್ಲಿಗಲ್ಲಿಗಳಲ್ಲಿ ವ್ಯಾಕ್ಸಿನ್ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ನಮ್ಮನ್ನಗಲಿದ್ದಾರೆ. ಉಳಿದ ಪಕ್ಷದವರಂತೆ ಬಿಜೆಪಿಗರು ಮನೆಯಲ್ಲಿ ಅಡಗಿ ಕುಳಿತುಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಜೀವವನ್ನು ಬದಿಗೊತ್ತಿ ಜನಸೇವೆ ಮಾಡಿದ್ದಾರೆ. ಬಹಳಷ್ಟು ಜನ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ನವರು ಆ ಅವಧಿಯಲ್ಲಿ ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದರು.
ಈಗ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ವೇಷ ತೊಟ್ಟು ಮತಯಾಚನೆಗೆ ಬರುತ್ತಾರೆ. ಅಂತಹವರನ್ನು ಕೊರೊನಾದಲ್ಲಿ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡಬೇಕು ಎಂದರು.