ಶಿವಾನಂದ ಪಾಟೀಲ ವಿರುದ್ಧ ನಾಲಿಗೆ ಹರಿಬಿಟ್ಟ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲು

Advertisement

ಬಾಗಲಕೋಟೆ: ಸಚಿವ ಶಿವಾನಂದ ಪಾಟೀಲ ಅವರನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಿರುದ್ಧ ಇಲ್ಲಿನ ನವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನವನಗರದ ಸೆಕ್ಟರ್ ನಂ.೧೧೦ರಲ್ಲಿ ಏ.೨೯ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಆಗಮನಕ್ಕೂ ಮುನ್ನ ಶಾಸಕ ಯತ್ನಾಳ ಮಾತನಾಡಿ ಶಿವಾನಂದ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಚುನಾವಣಾ ಆಯೋಗದ ಸಿಬ್ಬಂದಿ ನವನಗರ ಠಾಣೆಗೆ ಲಿಖಿತ ದೂರು ನೀಡಿದ್ದರು ಅದನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಯತ್ನಾಳ ಭಾಷಣದಲ್ಲಿ ಶಿವಾನಂದ ಪಾಟೀಲ ಕುಟುಂಬ ರಂಜಾನದಲ್ಲಿ ರೋಜಾ ಮಾಡುತ್ತದೆ ಇಂಥ ಕುಟಂಬಕ್ಕೆ ಮತ ನೀಡುವ ಬದಲು ಸನಾತನ ಧರ್ಮ ಉಳುವಿಗಾಗಿ ಬಿಜೆಪಿಗೆ ಮತ ನೀಡಿ, ಶಿವಾನಂದ ಪಾಟೀಲ ಕುಟುಂಬ ವಿಜಯಪುರದಲ್ಲಿ ಜಾತ್ರೆ ಮುಗಿಸಿದೆ. ಇಲ್ಲಿ ಬಂದರೆ ಬಸವೇಶ್ವರ ವಿದ್ಯಾವರ್ಧಕ ಸಂಘ, ಸಕ್ಕರೆ ಕಾರ್ಖಾನೆ, ಡಿಸಿಸಿ ಬ್ಯಾಂಕ್ ಗಳು ಉಳಿಯುವುದಿಲ್ಲ ಎಂದಿದ್ದರು.

ಈ ಬಗ್ಗೆ ಇದೀಗ ದೂರು ದಾಖಲಾಗಿದೆ. ಈ ದೂರು ಹೊರತಾಗಿಯೂ ಈ ಹಿಂದೆ ಬಸನಗೌಡ ಪಾಟೀಲ ಯತ್ನಾಳ ಅವರು ಸಕ್ಕರೆ ಕಾರ್ಖಾನೆಗಳಿಂದ ಶಿವಾನಂದ ಪಾಟೀಲ ದುಡ್ಡು ಪಡೆದಿದ್ದಾರೆ ಎಂಬ ಮಾತು ಆಡಿದ್ದರು. ಈ ವಿಚಾರವಾಗಿಯೂ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ದೂರು ದಾಖಲಿಸಿದೆ.