ಮೈಸೂರು: ಭಾನುವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆದ ಮೈತ್ರಿ ಸಮಾವೇಶದ ಬಳಿಕ ಅಲ್ಲಿ ಕಂಡು ಬಂದಿದ್ದ ರಾಶಿ ರಾಶಿ ಕಸ ತೆರವುಗೊಳಿಸಲು ಅಭ್ಯರ್ಥಿ ಯದುವೀರ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಹಾಗು ಸ್ವಯಂಸೇವಕರ ತಂಡದೊಂದಿಗೆ ಶ್ರಮದಾನದಲ್ಲಿ ಭಾಗಿಯಾದರು. ಮೈದಾನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪಾಲಿಕೆ ಸಿಬ್ಬಂದಿಗೆ ಈ ವೇಳೆ ಕೃತಜ್ಞತೆ ಸಲ್ಲಿಸಿದ ಯದುವೀರ್ ದಂಪತಿ, ಅವರ ಜೊತೆಗೂಡಿ, ಪಾಸ್ಟಿಕ್ಬಾಟಲುಗಳು, ವಿವಿಧ ಪ್ಯಾಕ್ನ ಕಸ, ಪೇಪರ್ಚೂರುಗಳು, ಪ್ಲಾಸ್ಟಿಕ್ಕವರ್ ಇತ್ಯಾದಿಗಳನ್ನು ಆಯ್ದು ತುಂಬಲು ನೆರವಾದರು.
ಈ ವೇಳೆ ಮಾತನಾಡಿದ ಯದುವೀರ್ ಅವರು, ನಗರವು ಯಾವಾಗಲೂ ಸ್ವಚ್ಛವಾಗಿರಬೇಕು. ಮೋದಿಜಿಯವರ ಬೃಹತ್ ಕಾರ್ಯಕ್ರಮದ ನಂತರ ಮೈದಾನವನ್ನು ಶುಚಿಗೊಳಿಸುವುದು ಸಹ ನನ್ನ ಕರ್ತವ್ಯ, ನಮ್ಮ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದೂ ಬಿಂಬಿಸಿದರು.