ಸಮಾಜದಲ್ಲಿ ಶಾಂತಿ ನೆಲೆಸಲು ಕ್ರಮ ಅಗತ್ಯ

Advertisement

ಧಾರವಾಡ: ಮನೆ ಮನೆಗೆ ಕಲ್ಲು ಹೊಡೆಯೋದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಲ್ಲ. ಸಮಾಜದಲ್ಲಿ ಶಾಂತಿ ನೆಲೆಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಪತ್ರಕರ್ತರಿಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು. ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಯಾರು ಸಹ ಸಣ್ಣ ವಿಚಾರ ಎಂದು ಕಡೆಗಣಿಸಬಾರದು. ಸರ್ಕಾರ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದುಃಖ ಆಗಿರಬಾರದು, ಸರ್ವರು ಸಂತೋಷವಾಗಿಯೇ ಇರಬೇಕು ಎಂಬ ಉದ್ದೇಶ ನಮ್ಮದಾಗಬೇಕು. ಧರ್ಮ ಎಂದರೆ ಸಮಾಜ ನಿರಂತರ ಮುನ್ನಡೆಸುವ ಬದುಕಿನ ಸೂತ್ರ. ಎಲ್ಲರೂ ಸುಖ, ಸಂತೋಷದಿಂದ ಇರಬೇಕು. ಅದಕ್ಕೆ ಅಳವಡಿಸಿಕೊಳ್ಳಬೇಕಾದ ನೀತಿ ನಿಯಮವೇ ಸನಾತನ ಧರ್ಮ ಎಂದರು.
ಎಲ್ಲರಿಗೂ ಸುಖ ಸಿಗುವಂತೆ ನಾವು ಪ್ರಯತ್ನಿಸಬೇಕು. ಮಳೆ ಬಂದಾಗ ಇಡೀ ಊರಿಗೆ ಬರುತ್ತದೆ. ಹಾಗೇ ಸುಖ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ನಾವು ಇನ್ನೊಬ್ಬರ ಸುಖ ಬಯಸಿದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದು ತಿಳಿಸಿದರು.