ಸ್ಪೋಟ ಪ್ರಕರಣ ಹಿಂದಿರುವ ಶಕ್ತಿಗಳನ್ನು ಕೇಂದ್ರ, ರಾಜ್ಯ ಸರ್ಕಾರ ಪತ್ತೆ ಮಾಡಲಿವೆ: ಮಾಜಿ ಸಿಎಂ ಶೆಟ್ಟರ

Shettar
Advertisement

ಹುಬ್ಬಳ್ಳಿ : ಮಂಗಳೂರು ಸ್ಪೋಟ ಪ್ರಕರಣದ ಹಿಂದಿರುವ ಶಕ್ತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪತ್ತೆ ಮಾಡಲಿವೆ. ಇದು ಜಾಗೃತ ದಳದ ವೈಫಲ್ಯವಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಕದಡುವ ಪ್ರಯತ್ನವನ್ನು ದುಷ್ಟ ಶಕ್ತಿಗಳು ದೇಶದ ವಿವಿಧ ಭಾಗಗಳಲ್ಲಿ ಹೊಂಚು ಹಾಕಿ ನಡೆಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಕೃತ್ಯಗಳನ್ನು ಬಹಳಷ್ಟು ಮಟ್ಟ ಹಾಕಿದ್ದಾರೆ. ಆದರೂ ಅಲ್ಲೊಂದು ಇಲ್ಲೊಂದು ಇಂತಹ ಕೃತ್ಯ ನಡೆಯುತ್ತಿವೆ. ಇಂಥವುಗಳಲ್ಲಿ ಮಂಗಳೂರಿನಲ್ಲಿ ನಡೆದ ಸ್ಪೋಟ ಪ್ರಕರಣವೂ ಒಂದು. ಪ್ರಕರಣವನ್ನು ಗಂಭೀರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡಿವೆ
ಈ ದುಷ್ಕೃತ್ಯದ ಹಿಂದೆ ಇರುವ ಶಕ್ತಿ ಯಾವುದು ಎಂಬುದನ್ನೂ ಪತ್ತೆ ಮಾಡಲಿವೆ ಎಂದರು.
ಮುಂದಿನ ಸೋಲಿಗೆ ಈಗಲೇ ಕಾರಣ ಹುಡುಕಿದೆ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿರುವುದು ಬಿಬಿಎಂಪಿ ವ್ಯಾಪ್ತಿಗೆ ಮಾತ್ರ.ಹಿಂದಿನ ಕಾಂಗ್ರೆಸ್ ಸರ್ಕಾರವೇ ಅದನ್ನು ವಹಿಸಿಕೊಟ್ಟಿದ್ದು. ನಮ್ಮ ಸರ್ಕಾರವಲ್ಲ. ಅದನ್ನೇ ರಾಜ್ಯವ್ಯಾಪಿಯಾಗಿ ಸಾರ್ವತ್ರಿಕವಾಗಿ ನೋಡುವುದು ಸರಿಯಲ್ಲ ಎಂದು ಶೆಟ್ಟರ ಹೇಳಿದರು. ಆದಾಗ್ಯೂ ತ‌ನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದರು
ಕಾಂಗ್ರೆಸ್ ಪಕ್ಷ ಮುಂದಿನ ಬಿಬಿಎಂಪಿ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಸೋಲುತ್ತದೆ. ಸೋಲುವುದು ಪಕ್ಕಾ ಆಗಿದೆ. ಆ ಸೋಲಿಗೆ ಕಾರಣ ಹುಡುಕುವ ಭಾಗವಾಗಿ ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಪ್ರಸ್ತಾಪಿಸುತ್ತಿದೆ ಸೋತಾಗ ಇದೇ ಕಾರಣದಿಂದ ಸೋತಿದ್ದು ಎಂದು ಹೇಳಿಕೊಳ್ಳಲು ಮಾಡಿಕೊಂಡ ವ್ಯವಸ್ಥೆ ಎಂದು ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.