ಹಣ ವಸೂಲಿ-ಕ್ಯಾಮೆರಾ ಕಂಡು ದಿಕ್ಕೆಟ್ಟು ಓಡಿದ ಆರ್‌ಟಿಒ ಸಿಬ್ಬಂದಿ

Advertisement

ಕೊಪ್ಪಳ: ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದ ಆರ್‌ಟಿಓ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾ ಕಂಡು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ರಾಷ್ಟ್ರೀಯ ಹೆದ್ದಾರಿ 50ರ ಕೆರೆಹಳ್ಳಿ ಹತ್ತಿರ ಇಂದು ನಡೆದಿದೆ.
ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಶುಕ್ರವಾರ ಅಂಜನಾದ್ರಿಗೆ ಆಗಮಿಸಿದ್ದರು. ಈ ಕಾರ್ಯಕ್ರಮದ ವರದಿಗೆ ತೆರಳಿ ವಾಪಸ್‌ ಬರುವಾಗ ವಾರ್ತಾ ಇಲಾಖೆಯ ವಾಹನವನ್ನು ಅಧಿಕಾರಿಗಳು ತಡೆದು ನಿಲ್ಲಿಸಿದರು. ಏಕೆಂದು ಪ್ರಶ್ನಿಸಿದಾಗ ಏನೂ ಉತ್ತರಿಸಲಿಲ್ಲ. ಇದೇ ವೇಳೆ ಆರ್‌ಟಿಒ ಕಚೇರಿಯ ಬ್ರೇಕ್‌ ಇನ್ಸ್‌ಪೆಕ್ಟರ್‌ ಜವರೇಗೌಡ ಅವರಿಗೆ ಲಾರಿ ಚಾಲಕನೊಬ್ಬ 50 ರೂ. ಕೊಡಲು ಬಂದಾಗ ಮಾಧ್ಯಮ ಪ್ರತಿನಿಧಿಗಳು ಕ್ಯಾಮೆರಾದಲ್ಲಿ ಅದನ್ನು ದಾಖಲಿಸಲು ಮುಂದಾದರು. ಇದನ್ನು ಕಂಡ ಆರ್‌ಟಿಒ ಸಿಬ್ಬಂದಿ ಗಲಿಬಿಲಿಗೊಂಡು ರಸ್ತೆಯ ಪಕ್ಕದಲ್ಲಿದ್ದ ಹೊಲದಲ್ಲಿ ಓಡಿ ಹೋದರು. ಅವರನ್ನು ಮಾಧ್ಯಮದವರು ಬೆನ್ನಟ್ಟಿದಾಗ ಹಣ ತುಂಬಿದ ಚೀಲವನ್ನು ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ಚಿತ್ರಣ ಕಂಡುಬಂತು. ‘ಯಾಕೆ ಓಡುವಿರಿ ನೀವು ಅಧಿಕಾರಿಗಳು ಹೌದೊ ಅಲ್ಲವೊ’ ಎಂದು ಪ್ರಶ್ನಿಸಿದಾಗ ಉತ್ತರ ಕೊಡದೆ ಸಿಬ್ಬಂದಿ ಓಡಿ ಹೋದರು.