ಹರಿದ ಇಪ್ಪತ್ತರ ನೋಟಿಗಾಗಿ ಜಗಳ: ಒರ್ವ ಮಹಿಳೆ ಸಾವು

Advertisement

ಸಿಂಧನೂರು: ಹರಿದ ಇಪ್ಪತ್ತು ರುಪಾಯಿ ನೋಟಿಗಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಒಬ್ಬಾಕೆ ಮೃತಪಟ್ಟಿರುವ ಘಟನೆ ತಾಲೂಕಿನ ಗೀತಾ ಕ್ಯಾಂಪಿನಲ್ಲಿ ಜರುಗಿದೆ.
ರುಕ್ಕಮ್ಮಳ ಮಗಳು ಕ್ಯಾಂಪಿನಲ್ಲಿರುವ ಮಲ್ಲಮ್ಮ ಎಂಬಾಕೆಯ ಅಂಗಡಿಯಿಂದ ಶನಿವಾರ ದಿನಸಿ ಖರೀದಿ ಮಾಡಿಕೊಂಡು ಮನೆಗೆ ಬಂದು ತಾಯಿಗೆ 20 ರುಪಾಯಿ ಹರಕು ನೋಟ್‌ ಕೊಟ್ಟಿದ್ದಾಳೆ. ಆಗ ರುಕ್ಕಮ್ಮ ಅಂಗಡಿಗೆ ಹೋಗಿ ನೋಟು ಬದಲಾಯಿಸಿಕೊಂಡುವಂತೆ ಕೇಳಿದಾಗ, ನಿಮ್ಮ ಮಗಳು ನಮ್ಮ ಅಂಗಡಿಗೆ ಬಂದೇ ಇಲ್ಲ ಎಂದು ಮಲ್ಲಮ್ಮ ಹೇಳಿದ್ದಾಳೆ. ಇದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮಲ್ಲಮ್ಮ ತಮ್ಮ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಪೆಟ್ರೋಲ್‌ ಬಾಟಲ್‌ನಿಂದ ರುಕ್ಕಮ್ಮಳಿಗೆ ಹೊಡೆದಿದ್ದಾಳೆ.
ಆಗ ಪೆಟ್ರೋಲ್‌ ಇಬ್ಬರ ಮೈಗೂ ತಾಕಿ ನಂತರ ಪಕ್ಕದಲ್ಲಿ ಉರಿಯುತ್ತಿದ್ದ ದೇವರ ದೀಪಕ್ಕೂ ಚಿಮ್ಮಿದ ಪರಿಣಾಮ ಇಬ್ಬರಿಗೂ ಬೆಂಕಿ ತಗುಲಿದೆ. ಗಂಭೀರ ಗಾಯಗೊಂಡ ಮಲ್ಲಮ್ಮಳನ್ನು ಬಳ್ಳಾರಿ ವಿಮ್ಸ್‌ಗೆ, ರುಕ್ಕಮ್ಮಳನ್ನು ರಾಯಚೂರಿನ ರಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇದೀಗ ರುಕ್ಕಮ್ಮ ಮೃತಪಟ್ಟಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಡೆಯಿಂದಲೂ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.