ಹರಿಯಲ್ಲಿ ಅನುರಕ್ತಿ ಇರಲಿ ವಿರಕ್ತಿ ಬೇಡ

PRATHAPPHOTOS.COM
Advertisement

ಯಾವುದೇ ವ್ಯಕ್ತಿ ಗುಣವಂತನಾಗಬೇಕಾದರೆ ಯಾರೇ ಭಕ್ತಿಯಿಂದ ಪರಮಾತ್ಮನ ಉತ್ತಮವಾದಂತ ಕೀರ್ತಿ ಉತ್ತಮವಾದ ಗುಣಗಳನ್ನು ವರ್ಣನೆ ಮಾಡುತ್ತಾರೆ ಅಂಥವರು ಶೋಕವನ್ನು ಪರಿಹಾರ ಮಾಡುವಂತಹ ಗುಣಗಳನ್ನು ತಾವು ಹೊಂದುತ್ತಾರೆ.
ಅಂತಹ ಲಾಭ ಇರುವಾಗ ಪರಮಾತ್ಮನ ಗುಣಗಳನ್ನು ವರ್ಣನೆ ಮಾಡುವಂತಹ ಪ್ರವಚನಗಳನ್ನು ಯಾರು ಶ್ರವಣ ಮಾಡದೇ ಇರೋಕೆ ಸಾಧ್ಯ.?
ಹರಿಯಲ್ಲಿ ಅನುರಕ್ತನಾಗುವ ಭಕ್ತನು ಯಾರೇ ಇರಬಹುದು. ಯಾವ ವರ್ಣಕ್ಕೆ ಸೇರಿದವನಾಗಿರಲಿ ಯಾವುದೇ ವರ್ಣ ಬಾಹಿರವಾಗಿರಲಿ, ಆ ವ್ಯಕ್ತಿ ಭಗವಂತನ ಗುಣಗಳ ಶ್ರವಣ ಮಾಡಿದರೆ, ಆ ವ್ಯಕ್ತಿ ಪರಮಾತ್ಮನ ಅನುಗ್ರಹದಿಂದ ಆ ಉತ್ತಮವಾದ ಗುಣಗಳನ್ನು ಅವಶ್ಯವಾಗಿ ಹೊಂದುತ್ತಾನೆ. ಇಷ್ಟಾಗಿಯೂ ವಿರಕ್ತನಾದರೆ, ಐಹಿಕ ಸುಖ ಮತ್ತು ಮೋಕ್ಷದ ಸುಖ ಬೇಡ ಎಂದು ವಿಮುಖನಾದರೆ, ಒಂದು ಧೈರ್ಯದಿಂದ ಸಾಕು ಎಂದು ಹೇಳಬಹುದು.
ಸುಖ ಮೋಕ್ಷ ಬೇಡ, ದೇವರ ಕಥೆ ಬೇಡ ಎಂದು ಹೇಳಬಹುದು. ಆದರೆ ಐಹಿಕ ಪಾರಲೋಕಿಕ ಮೋಕ್ಷಕ್ಕೆ ದೇವರ ಕಥೆಯೇ ಕಾರಣ. ಆ ಭಗವಂತನ ಮಹಿಮೆ ಅನುಸಂಧಾನವೇ ಕಾರಣ. ಅವನು ಸುಖದಲ್ಲೂ ವಿರತನಾಗಿದ್ದಾನೆ ಎಂದು ಅರ್ಥ. ಸಂಸಾರಿಕ ಸುಖದಲ್ಲಿ, ಮೋಕ್ಷದ ಸುಖದಲ್ಲಿ ಅವನು ವಿರಕ್ತನಾಗಬೇಕಾದೀತು.
ಆದ್ದರಿಂದ ಸುಖ ಬೇಕೆಂದು ಬಯಸುವವರು ಸುಖ ಸಾಧನರಾದಂತಹ ಪರಮಾತ್ಮನ ಗುಣಗಳ ಕೀರ್ತನೆಗಳನ್ನು ಅತ್ಯಂತ ಭಕ್ತಿಯಿಂದ, ಸುಖ ಸಾಧನವಾಗುವ ರೀತಿಯಲ್ಲಿ ಶ್ರವಣ ಮಾಡಬೇಕು ಹೊರತು ವಿರಕ್ತರಾಗಬಾರದು.
ಜ್ಞಾನ, ಭಕ್ತಿ, ವೈರಾಗ್ಯ ಭಗವಂತನ ವಿಷಯದಲ್ಲಿ ಜ್ಞಾನ ಭಕ್ತಿ, ಮತ್ತು ಹರಿಕಥಾಮೃತಸಾರದಲ್ಲಿ ವೈರಾಗ್ಯ ಕೆಲವೊಬ್ಬರು ಹೇಳುವಾಗ ಹೇಳುತ್ತಾರೆ. ಜಗತ್ತಿನ ವಿಷಯದಲ್ಲಿ ವೈರಾಗ್ಯ ಇರಬೇಕೆ ಹೊರತು ಹರಿಕಥಾಶ್ರವಣದಲ್ಲಿ ವೈರಾಗ್ಯ ಇರಬಾರದು ಎಂದು ಪರೀಕ್ಷಿತ ರಾಜರು ಶುಕಾಚಾರ್ಯರಿಗೆ ವಿಜ್ಞಾಪನೆ ಮಾಡುತ್ತಾ ಹೇಳುತ್ತಾರೆ. ಹರಿಯ ಕಥೆಯನ್ನು ಕೇಳುತ್ತಾ ಇರಬೇಕು ವೈರಾಗ್ಯ ತಾಳಬಾರದು. ಕಾರಣ ಹರಿಕಥೆಯೇ ಒಂದು ಮಾದರೀಯವಾದ ಜೀವನಕ್ಕೆ ದಾರಿಯಾಗಿದೆ. ದೇವರು ನಾನಾ ಅವತಾರಗಳನ್ನು ಎತ್ತುವ ಮೂಲಕ ಸುಖದ ಜೀವನದ ದಾರಿಯನ್ನು ಹೇಳಿಕೊಟ್ಟಿದ್ದಾನೆ. ಅಂಥ ಹರಿಯ ಕತೆಯ ಅನುಸಂಧಾನದಲ್ಲಿ ಯಾವಾಗಲೂ ವಿರಕ್ತಿ ಇರಕೂಡದು.