ಹಿಂಡಲಗಾ ಕಾರಾಗೃಹದ ಇಬ್ಬರು ಸಿಬ್ಬಂದಿ ಅಮಾನತು

Advertisement

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಕಾರಾಗೃಹದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಹೆಡ್ ವಾರ್ಡರ್ ಬಿ.ಎಲ್. ಮೆಳವಂಕಿ, ವಾರ್ಡರ್ ವಿ.ಟಿ. ವಾಘ್ಮೋರೆ ಅಮಾನತುಗೊಂಡವರು. ಉತ್ತರ ವಲಯದ ಕಾರಾಗೃಹ ಉಪಮಹಾನಿರೀಕ್ಷಕ ಟಿ.ಪಿ. ಶೇಷ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ಕಿರುಕುಳ ನೀಡುವುದು, ಹಣ ಕೊಟ್ಟ ಕೈದಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಿದ ಆರೋಪವನ್ನು ಅಮಾನತುಗೊಂಡವರು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಕೈದಿಗಳಿಂದ ಪರಸ್ಪರ ಹಲ್ಲೆ ಪ್ರಕರಣ ಕೂಡ ನಡೆದಿತ್ತು. ಈ ಎಲ್ಲ ವಿಚಾರಗಳ ಬಗ್ಗೆ `ಸಂಯುಕ್ತ ಕರ್ನಾಟಕ’ ವಿಶೇಷ ವರದಿ ಪ್ರಕಟಿಸಿತ್ತು.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಪರಿಗಣಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಈ ವೇಳೆ ಜೈಲಿನ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಲಯದ ಟಿ.ಪಿ. ಶೇಷ ಅವರಿಗೆ ಸೂಚಿಸಿದ್ದರು.