ಹುನಗುಂದ ಪುರಸಭೆಯಲ್ಲಿ ಧರ್ಮ ಸಂಘರ್ಷ

ಧರ್ಮ ಸಂಘರ್ಷ
Advertisement

ಬಾಗಲಕೋಟೆ(ಹುನಗುಂದ): ಧರ್ಮ ಸಂಘರ್ಷ ಈಗ ಹುನಗುಂದ ಪುರಸಭೆ ಕಚೇರಿ ಪ್ರವೇಶಿಸಿದೆ. ಪುರಸಭೆ ನೂತನ ಅಧ್ಯಕ್ಷ ಪರವೇಜ್ ಖಾಜಿ ಅವರು ಕುರಾನ್ ಪಠಣದೊಂದಿಗೆ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬುಧವಾರ ಪುರಸಭೆ ಸಭಾ ಭವನದಲ್ಲಿ ಗೋ ಪೂಜೆ ನಡೆಸಿದರು.
ಪರವೇಜ್ ಖಾಜಿ ಅಧ್ಯಕ್ಷರಾದ ನಂತರ ಬುಧವಾರ ಸಾಮಾನ್ಯ ಸಭೆ ಕರೆದಿದ್ದರು. ಬಿಜೆಪಿ ಸದಸ್ಯರು ಪುರಸಭೆ ಕಚೇರಿಗೆ ಬಂದರೂ ಸಭೆಗೆ ಹಾಜರಾಗದೇ ಮುಖ್ಯಾಧಿಕಾರಿ ಕೊಠಡಿಯಲ್ಲಿ ಕುಳಿತರು. ಸಭೆ ಮುಗಿದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಹೊರ ಬಂದ ನಂತರ ಸಭಾಭವನದಲ್ಲಿ ಗೋ ಪೂಜೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸದಸ್ಯರಾದ ಶಾಂತಪ್ಪ ಹೊಸಮನಿ ಮತ್ತು ಪ್ರವೀಣ ಹಳಪೇಟಿ ಅವರು ಅಧ್ಯಕ್ಷ ಪರವೇಜ್ ಖಾಜಿ ಅಧ್ಯಕ್ಷರ ಕೊಠಡಿಯಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಕರೆಯಿಸಿ ಕುರಾನ್ ಪಠಣ ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಎಲ್ಲರೂ ಪೂಜಿಸುವ ಗೋ ಮಾತೆಯ ಪೂಜೆಯನ್ನು ನಾವು ಮಾಡಿದ್ದೇವೆ ಎಂದರು.
ಬಿಜೆಪಿ ಸದಸ್ಯರಾದ ಚಂದಪ್ಪ ಕಡಿವಾಲ, ಮಹೇಶ ಬೆಳ್ಳಿಹಾಳ, ಬಸಮ್ಮ ಚಿತ್ತವಾಡಗಿ, ಶ್ರೀದೇವಿ ಚೂರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಧರ್ಮ ಸಂಘರ್ಷ