ಹುಲಿ ಪ್ರತ್ಯಕ್ಷ ಬೆನ್ನಲ್ಲೇ ಚಿರತೆ ದಾಳಿ: ನಾಲ್ಕು ಆಡು ಬಲಿ

Advertisement

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಹಾಗೂ ಮಹದೇವಪುರ ಗ್ರಾಮಗಳ ಬಳಿ ಹುಲಿಯೊಂದು ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ಗೊಬ್ಬರಗಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಧಾಳಿ ನಡೆಸಿ ನಾಲ್ಕು ಆಡುಗಳನ್ನು ಬಲಿ ಪಡೆದಿರುವ ಘಟನೆ ಸಂಭವಿಸಿದೆ.
ಗ್ರಾಮದ ನಾಗರಾಜು ಎಂಬುವವರಿಗೆ ಸೇರಿದ ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿದಂತೆ ನಾಲ್ಕು ಆಡುಗಳು ಚಿರತೆ ಧಾಳಿಯಿಂದ ಸಾವನ್ನಪ್ಪಿದ್ದು, ಆಡುಗಳ ಶಬ್ದ ಗ್ರಹಿಸಿ ಮಾಲೀಕ ಓಡೋಡಿ ಬರುವಷ್ಟರಲ್ಲಿ ಆಡುಗಳ ರಕ್ತ ಹೀರಿ ಚಿರತೆಯೊಂದು ಪರಾರಿಯಾಗಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ. ಇದೀಗ ಈ ಭಾಗದ ಗ್ರಾಮಸ್ಥರ ಎದೆಯಲ್ಲಿ‌ ನಡುಕ ಉಂಟಾಗಿದ್ದು, ಯಾವಾಗ ಎಲ್ಲಿ ಹುಲಿ,‌ ಚಿರತೆ ಪ್ರತ್ಯಕ್ಷಗೊಳ್ಳುತ್ತದೋ ಎಂಬ ಭಯದಲ್ಲೇ ಓಡಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು‌ ಗ್ರಾಮಕ್ಕೆ ಭೇಟಿ ನೀಡಿ ಹುಲಿ‌ ಮತ್ತು ಚಿರತೆ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿ ಅವುಗಳ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.