ಹೊಟ್ಟೆ ಹಸಿದವರ ಬಗ್ಗೆ ಚಿಂತಿಸುವ ಸರ್ಕಾರ ನಮ್ಮದು

ತಂಗಡಗಿ
Advertisement

ಕೊಪ್ಪಳ: ಕೆಲವು ಶ್ರೀಮಂತರಿಗೆ ಬಡವರಿಗೆ ಸಹಾಯ ಮಾಡುವುದು ತಡೆಯಲಾಗುವುದಿಲ್ಲ. ನಾರಾಯಣಮೂರ್ತಿ, ಮೋದಿ ಸೇರಿ ಮತ್ತೊಬ್ಬರು ಬದುಕುವ ಸಲುವಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿಲ್ಲ. ಬದಲಿಗೆ ಒಂದೊತ್ತಿನ ಊಟಕ್ಕೂ ಕಷ್ಟಪಡುವ ಬಡವರಿಗೆ ಜೀವನ ನಿರ್ವಹಣೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಡವರ ಹಸಿವು ನೀಗಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲಿದೆ. ಹೊಟ್ಟೆ ಹಸಿದವರ ಬಗ್ಗೆ ಚಿಂತನೆ ಮಾಡುವ ಸರ್ಕಾರ ನಮ್ಮದಾಗಿದ್ದು, ಉಳಿದವರ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದು ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ ಇನ್ಫೊಸಿಸ್ ನಾರಾಯಣಮೂರ್ತಿ ಹೇಳಿಕೆಗೆ ತಿರುಗೇಟು ನೀಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ೧೨ ದಿನ ಪ್ರಚಾರಕ್ಕೆ ಹೋಗಿದ್ದೇನೆ. ಕರ್ನಾಟಕದಲ್ಲಿ ೫ ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಸರ್ಕಾರ ಬಂದ ೬ ತಿಂಗಳಲ್ಲಿಯೇ ೫ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅದೇ ರೀತಿ ತೆಲಂಗಾಣದ ಜನರಿಗೆ ೬ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಕರ್ನಾಟಕದಂತೆ ನಮ್ಮಲ್ಲೂ ಅನುಷ್ಠಾನ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿ ತೆಲಂಗಾಣದ ಜನರಿದ್ದಾರೆ. ತೆಲಂಗಾಣದಲ್ಲಿ ೧೦೦ಕ್ಕೆ ೧೦೦ರಷ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.