ಜಾತಿ ಹೆಸರು ಬಳಸಿ ಟೀಕೆ ಮಾಡಿದ್ದು ಸರಿಯಲ್ಲ: ಶೆಟ್ಟರ್

ಶೆಟ್ಟರ್
Advertisement

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯವಾಗಿ ಹೇಳಿಕೆಗಳನ್ನು ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ವ್ಯಕ್ತಿಗತವಾಗಿಯಾಗಲಿ, ಜಾತಿ ಹೆಸರು ಬಳಸಿಕೊಂಡು ಟೀಕೆ ಮಾಡುವುದು ಸರಿಯಲ್ಲ. ಅದರ ಅಗತ್ಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು. ಅನುಭವಿ ರಾಜಕಾರಣಿಯಾಗಿ ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕಿತ್ತು. `ಬ್ರಾಹ್ಮಣ’ ಜಾತಿ ಹೆಸರು ಬಳಸಿಕೊಂಡು ಟೀಕೆ ಮಾಡಿರುವುದನ್ನು ಯಾರೂ ಒಪ್ಪುವುದಿಲ್ಲ. ಯಾಕೆ ಹೀಗೆ ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಪರಸ್ಪರ ಒಬ್ಬರ ಮೇಲೆ ಒಬ್ಬರು ಟೀಕೆ ಟಿಪ್ಪಣಿ ಮಾಡುವುದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದರು.
ವೈಯಕ್ತಿಕವಾದ ವಿಚಾರ ಹಾಗೂ ವ್ಯಕ್ತಿ ಬಗ್ಗೆ ಈ ರೀತಿ ಮಾತನಾಡುವುದು ಅಪ್ರಸ್ತುತ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಮುಖ್ಯಮಂತ್ರಿ ಯಾರು ಆಗಬೇಕು ಎಂಬುದರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತವೆ ಎಂದರು.