ಬಿಜೆಪಿ ಕಾರ್ಪೋರೇಟರ್‌ಗೆ ಕೊಲೆ ಬೆದರಿಕೆ!

Advertisement

ಸುರತ್ಕಲ್: ಇಲ್ಲಿನ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೇಲೆ ಯುವಕನೊಬ್ಬ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಎಂಬವರು ದೂರಿದ್ದು ಅದರಲ್ಲಿ ಸ್ಥಳೀಯ ನಿವಾಸಿ ಗಣೇಶ್ ದೇವಾಡಿಗ ಎಂಬವನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಕಾಟಿಪಳ್ಳದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಟ್ಟಿಕೊಂಡಿರುವ ಎ.ಪಿ. ಮೋಹನ್, ಗಣೇಶ್ ದೇವಾಡಿಗ ಹಾಗೂ ಗಿರೀಶ್ ಎಂಬವರು ಕಳೆದ ಕೆಲವು ವರ್ಷಗಳಿಂದ ಲೋಕೇಶ್ ವಿರುದ್ಧ ಮಾನಹಾನಿಕರ ಮೆಸೇಜ್ ರವಾನಿಸುವುದಲ್ಲದೆ ಆಗಾಗ ಜಗಳಕ್ಕೆ ನಿಲ್ಲುತ್ತಿದ್ದರು. ಇತ್ತೀಚಿಗೆ ಕಾಟಿಪಳ್ಳ ರಿಕ್ಷಾ ಪಾರ್ಕ್ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 50 ಲಕ್ಷ ರೂ. ಅನುದಾನದಲ್ಲಿ ಗುದ್ದಲಿ ಪೂಜೆ ನಡೆಸಿದ್ದು ಅದರ ಬಗ್ಗೆ ಆರೋಪಿ ಗಣೇಶ್ ದೇವಾಡಿಗ ಮತ್ತಿತರರು ಸಾರ್ವಜನಿಕವಾಗಿ ಅವಹೇಳನಕಾರಿ ಮಾತಾಡುವುದು, ಮೆಸೇಜ್ ರವಾನಿಸುವುದು ಮಾಡುತ್ತಿದ್ದರು. ಮೊನ್ನೆ ಇದೇ ವಿಚಾರದಲ್ಲಿ ಗಣೇಶ್ ಎಂಬಾತ ಲೋಕೇಶ್ ಬೊಳ್ಳಾಜೆ ಜೊತೆ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿದ್ದು ಈ ವೇಳೆ ಅಪಾಯವನ್ನು ಅರಿತ ಲೋಕೇಶ್ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಲು ಮನೆಗೆ ತೆರಳಿದ್ದ ವೇಳೆ ಎ.ಪಿ. ಮೋಹನ್ ಪೊಲೀಸರ ಜೊತೆ ಜಗಳ ಮಾಡಿ ವಾಪಸ್ ಕಳುಹಿಸಿದ್ದಾನೆ ಎನ್ನಲಾಗಿದೆ. ಸದ್ಯ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.