ನಾವು ಬಿಜೆಪಿ ಬಂಡುಕೋರರಲ್ಲ, ಬಿಜೆಪಿಯಲ್ಲಿದ್ದು ಟಿಕೆಟ್ ಕೇಳುತ್ತಿದ್ದೇವೆ

ಬಾಗಲಕೋಟೆ
Advertisement

ಬಾಗಲಕೋಟೆ: ನೇಕಾರ ಪ್ರಧಾನ ಕ್ಷೇತ್ರವಾಗಿರುವ ತೇರದಾಳ ಮತಕ್ಷೇತ್ರಕ್ಕೆ ಸ್ಥಳೀಯರ ಅವಶ್ಯಕತೆಯಿದೆ. ನೇಕಾರ ವ್ಯಕ್ತಿಗೆ ಟಿಕೆಟ್ ನೀಡಿದ್ದೇಯಾದರೆ ಗೆಲುವು ನಿಶ್ಚಿತವಾಗಿದೆ. ನಾವೇನು ಪಕ್ಷದ ವಿರೋಧಿ ಅಥವಾ ಬಂಡುಕೋರರಲ್ಲ ನಾವು ಭಾರತೀಯ ಜನತಾ ಪಕ್ಷದಲ್ಲಿದ್ದೇವೆ. ಟಿಕೆಟ್ ಕೊಡುವಂತೆ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ ಹೇಳಿದರು.

ಬಂಗಾರೆವ್ವ ತಟ್ಟಿಮನಿ ಸಭಾ ಭವನದಲ್ಲಿ ನಡೆದ ನೇಕಾರರ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಶಾಸಕ ಸಿದ್ದು ಸವದಿ ಈ ಬಾರಿ ನಮ್ಮನ್ನು ಆಯ್ಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಸ್ಥಳೀಯ ನೇಕಾರರಿಗೆ ಅವಕಾಶ ಮಾಡಿ ಕೊಡುತ್ತೇನೆ ಎಂದಿದ್ದರು. ಆದರಂತೆ ಶಾಸಕರು ನಡೆಯಬೇಕಾಗಿದೆ.

ನಾಲ್ಕು ದಶಕಗಳಿಂದ ನೇಕಾರರು ಎಲ್ಲ ರೀತಿಯಿಂದಲೂ ವಂಚಿತರಾಗಿದ್ದಾರೆ. ಆದ್ದರಿಂದ ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಇಲ್ಲಿಯ ಬಹುತೇಕ ನೇಕಾರರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ಆದ್ದರಿಂದ ಪಕ್ಷದ ವರಿಷ್ಠರು ಅರ್ಹ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.