ಚಿಕ್ಕವಯಸ್ಸಿನಲ್ಲೆ ಅಸಮಾನತೆ ಪ್ರಶ್ನಿಸಿದ ಬಸವಣ್ಣನವರ ಬಗ್ಗೆ ನನಗೆ ಸದಾ ಬೆರಗು

Advertisement

ಬಾಗಲಕೋಟೆ: ಬಸವ ಜಯಂತಿ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಸವಣ್ಣಮವರ ಐಕ್ಯ ಸ್ಥಳ ಕೂಡಲ ಸಂಗಮಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಜತೆಗೆ ಐಕ್ಯ ಮಂಟಪ ಹಾಗೂ ಕೂಡಲಸಂಗಮನಾಥನ ದರ್ಶನ ಪಡೆದ ರಾಗಾ ನಂತರ ಬಸವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ಗುಣಗಾನ ಮಾಡಿದರು.
ಸಮಾಜದಲ್ಲಿ ಕತ್ತಲು ಕವಿದಾಗ ಬಸವಣ್ಣನವರು ಬೆಳಕಿನ ದಾರಿ ತೋರಿದರು. ೮ನೇ ವಯಸ್ಸಿನಲ್ಲೇ ಉಪನಯನ ವಿರೋಧಿಸಿ ಸಮಾನತೆ ಪ್ರತಿಪಾದಿಸಿದರು.ಆ ವಯಸ್ಸಿನಲ್ಲೇ ಅವರಿಗೆ ಆ ಯೋಚನೆ ಬಂದಿದ್ದು ನನಗೆ ಇಂದಿಗೂ ಬೆರಗು ಮೂಡಿಸುತ್ತದೆ ಎಂದರು. ಸಮಾಜದಲ್ಲಿ ಸತ್ಯ ನುಡಿಯಲು ಹಿಂದೇಟು ಹಾಕುವಾಗ ಬಸವಣ್ಣನವರು ಧ್ವನಿಯಾಗಿ ಅಂಕು, ಡೊಂಕುಗಳನ್ನು ತಿದ್ದಿದರು. ಜಾತೀವಾದ, ಶೋಷಣೆ ವಿರೋಧಿಸಿದರು. ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾ ಅದಕ್ಕೆ ಉತ್ತರವನ್ನು ಒದಗಿಸಿದರು. ಅವರ ತತ್ವಗಳು ಸಮಾಜಕ್ಕೆ ಸದಾ ದಾರಿದೀಪ ಎಂದರು.


ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಇಳಕಲ್ಲಿನ‌ ಶ್ರೀಗುರು ಮಹಾಂತ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪ್ರಥಮ‌ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಸವ ಧರ್ಮ ಪೀಠದ ಶ್ರೀಮಾದೇಶ್ವರ ಸ್ವಾಮೀಜಿ ಎಂ.ಬಿ.ಪಾಟೀಲ, ಎಂಸಿ ವೇಣುಗೋಪಾಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವೀಣಾ ಕಾಶಪ್ಪನವರ ಮತ್ತಿತರರು ಇದ್ದರು