ಬೆಂಬಲಿಗರಿಗೆ ಬಿಜೆಪಿ ನಾಯಕರಿಂದ ಧಮಕಿ

ಜಗದೀಶ ಶೆಟ್ಟರ್‌
Advertisement

ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬುದಕ್ಕಿಂತ ಜಗದೀಶ ಶೆಟ್ಟರ ಅವರನ್ನು ಸೋಲಿಸಬೇಕು ಎಂಬ ಗುರಿಯೊಂದಿಗೆ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿದ್ದಾರೆ. ನಮ್ಮ ಬೆಂಬಲಿಗರಿಗೆ ಧಮಕಿ ಹಾಕಿ ಬಲವಂತವಾಗಿ ಹಿಡಿದಿಟ್ಟುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬೆಂಬಲಿಗರಿಗೆ ಧಮಕಿ ಹಾಕಿ ಅವರನ್ನ ಬಲವಂತವಾಗಿ ಹಿಡಿದಿಟ್ಟುಕೊಳ್ಳು ಕೆಲಸ ನಡೆಯುತ್ತಿದೆ. ಪಾಲಿಕೆ ಸದಸ್ಯರು, ಕಾರ್ಯಕರ್ತರು ಮಾನಸಿಕವಾಗಿ ನನ್ನ ಜೊತೆಯೇ ಇದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರತಿಯೊಂದು ನಡೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಗೂಂಡಾಗಿರಿಯ ಪ್ರವೃತ್ತಿ ಮತ್ತು ಹತಾಶೆ ಭಾವನೆಯಾಗಿದ್ದು, ನನ್ನ ಮನೆಗೆ ಬರುವವರ ಮತ್ತು ಹೋಗುವವರ ಮೇಲೆ ನಿಗಾ ಇಡಲಾಗುತ್ತಿದೆ. ಇದು ಅಧಿಕಾರ ಮತ್ತು ಹಣದ ಮದ ಎಂದು ಶೆಟ್ಟರ ವಾಗ್ದಾಳಿ ನಡೆಸಿದರು.
ಬಿ.ಎಲ್. ಸಂತೋಷ ಅವರಿಂದ ಬಂದ ಸೂಚನೆಯ ಮೇರೆಗೆ ಎಲ್ಲವೂ ನಡೆಯುತ್ತಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಹರಿಹಾಯ್ದರು. ಬಿ.ಎಸ್. ಯಡಿಯೂರಪ್ಪ ಹಿರಿಯರು. ಬೇರೆಯವರ ಅಣತಿಯಂತೆ ನಡೆದುಕೊಳ್ಳಬಾರದು. ತಮ್ಮ ಮೇಲೆ ಕೆಲವರು ಬಂದೂಕು ಇಟ್ಟು ಬೇರೆಯವರು ಹೊಡೆಯುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಇಷ್ಟೆಲ್ಲ ನೇರವಾಗಿ ಮಾತನಾಡಿದರೂ ಅವರು ಏನನ್ನೂ ಮಾತನಾಡುತ್ತಿಲ್ಲ. ಅವರಿಗೆ ಧೈರ್ಯವಿಲ್ಲವೇ ಎನ್ನುವ ಮೂಲಕ ಬಿ.ಎಲ್. ಸಂತೋಷ್ ಅವರಿಗೆ ಟಾಂಗ್ ನೀಡಿದರು.