ಬಳ್ಳಾರಿ: ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ನಗರದ ಹೊರ ವಲಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಮಳೆ ಅಡ್ಡಿಯಾಗಿದೆ. ನಿಗದಿಯಂತೆ ಮಧ್ಯಾಹ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಆದ್ರೆ, ಗುರುವಾರ ತಡರಾತ್ರಿ ಆರಂಭ ಆದ ಮಳೆ ಶುಕ್ರವಾರ ಬೆಳಗಿನ ಜಾವದ ತನಕ ಸುರಿದಿದೆ. ಸಮಾವೇಶದ ಜಾಗದಲ್ಲಿ ಅಲ್ಲಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ಹವಾಮಾನ ಕಾರಣದಿಂದ ಹೆಲಿಕಾಪ್ಟರ್ ಇಳಿಸಲು ಏನಾದರೂ ಸಮಸ್ಯೆ ಆಗಬಹುದೇ ಎಂದು ತಾಂತ್ರಿಕ ತಂಡ ಪರೀಕ್ಷೆ ನಡೆಸಿತು.
ಹವಾಮಾನ ಇಲಾಖೆಯ ಅಂದಾಜಿನಂತೆ ಮಧ್ಯಾಹ್ನದವರೆಗೆ ಯಾವುದೇ ಮಳೆ ಬಾರದು ಎನ್ನಲಾಗುತ್ತಿದೆ. ಮಧ್ಯಾಹ್ನ 2.30 ಗಂಟೆಗೆ ಕಾರ್ಯಕ್ರಮ ನಿಗದಿ ಆಗಿರುವುದರಿಂದ ಈ ವೇಳೆಗೆ ನೆಲ ಆರಿ ಕಾರ್ಯಕ್ರಮ ಸುಗಮವಾಗಿ ನಡೆಯಬಹುದು ಎಂದು ಹೇಳಲಾಗುತ್ತಿದೆ.