ಯಡಿಯೂರಪ್ಪನವರಿಗೆ ಶೆಟ್ಟರ್ ಸೋಲಿಸುವ ಸುಪಾರಿ ನೀಡಿದ್ದಾರೆ

Advertisement

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಂಘದವರು ಹಾಗೂ ಬಿಜೆಪಿ ನಾಯಕರು ಜಗದೀಶ ಶೆಟ್ಟರ್ ಅವರನ್ನು ಸೋಲಿಸಲು ಸುಪಾರಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಲ್. ಹನಮಂತಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರು ತಮಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ತಮ್ಮನ್ನು ಎದುರು ಹಾಕಿಕೊಂಡವರಿಗೆ ಸೋಲು ಖಚಿತ ಎಂಬ ಸಂದೇಶವನ್ನು ಸಾರಲು ಬಿಜೆಪಿ ನಾಯಕರು ಶೆಟ್ಟರ್ ಅವರನ್ನು ಗುರಿಯಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದರು.
ಜಗದೀಶ ಶೆಟ್ಟರ್ ಅವರು ತಮಗೆ ಟಿಕೆಟ್ ತಪ್ಪಲು ಯಾರು ಕಾರಣ ಎಂಬುದನ್ನು ಬಹಿರಂಗ ಪಡಿಸಿದ ದಿನದಿಂದ ಬಿ.ಎಲ್. ಸಂತೋಷ ಹಾಗೂ ಪ್ರಹ್ಲಾದ ಜೋಶಿ ಶೆಟ್ಟರ್ ವಿರದ್ಧ ಮಾತನಾಡುತ್ತಿಲ್ಲ. ಬದಲಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ಜಗದೀಶ ಶೆಟ್ಟರ್ ವಿರುದ್ಧ ಮಾತನಾಡುವ ಸ್ಥಿತಿಯನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಹಿರಿಯ ಮುಖಂಡರು ಯಡಿಯೂರಪ್ಪನವರಿಗೆ ತಂದಿದ್ದಾರೆ. ಇನ್ನೂ ಮಠಾಧೀಶರು ಲಿಂಗಾಯತ ಮುಖಂಡನಿಗೆ ಅನ್ಯಾಯವಾಗುತ್ತಿದ್ದರೂ ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬುದು ಗೊತ್ತಿಲ್ಲ. ನ್ಯಾವ್ಯಾಕೆ ಈ ಚಕ್ರವ್ಯೂಹದಲ್ಲಿ ಸಿಲುಕಿ ಹಾಕಿಕೊಳ್ಳಬೇಕು ಎಂಬ ಉದ್ದೇಶದಿಂದ ಮೌನ ವಹಿಸಿದ್ದಾರೆ. ಮಠಾಧೀಶರು ಲಿಂಗಾಯತ ನಾಯಕನಿಗೆ ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದಾರೆ ಎಂಬ ವಿಷಾದ ನನ್ನಲ್ಲಿದೆ ಎಂದು ಹೇಳಿದರು. ಜಗದೀಶ ಶೆಟ್ಟರ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಮುಂದೆ ಅವರ ಹೆಸರು ಸಿಎಂ ಪಟ್ಟಿಯಲ್ಲಿ ಬಂದರೂ ಕಾಂಗ್ರೆಸ್ ನಾಯಕರು ಅದನ್ನು ಸಮ್ಮತಿಸುತ್ತಾರೆ ಎಂದರು. ದಶರಥ ವಾಲಿ, ಮೋಹನ ಹಿರೇಮನಿ ಇದ್ದರು.