ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಹಲವು ರಾಜಕೀಯ ವ್ಯಕ್ತಿಗಳು ಕೂಡ ಅಲ್ಲಿಗೆ ಆಗಮಿಸಿ ಅವರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಕೂಡ ಇಂದು ಜಂತರ್ ಮಂತರ್ ತಲುಪಿ ಕುಸ್ತಿಪಟುಗಳನ್ನು ಭೇಟಿ ಮಾಡಿದರು. ನಾವು ಇಲ್ಲಿ ಮಾತನಾಡಲು ಬಂದಿದ್ದೇವೆ, ಧರಣಿ ಮುಂದುವರಿಯುತ್ತದೆ ಎಂದು ಹೇಳಿದ ಅವರು ಬ್ರಿಜ್ ಭೂಷಣ್ ಶರಣ್ ಅವರನ್ನು ಇಲ್ಲಿಯವರೆಗೆ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಕುಸ್ತಿಪಟುಗಳನ್ನು ಬೆಂಬಲಿಸಲು ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಹೆಚ್ಚಿನ ಸಂಖ್ಯೆಯ ರೈತರು ದೆಹಲಿ ತಲುಪುವ ನಿರೀಕ್ಷೆಯಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಂಜಾಬ್ನ ಅತಿದೊಡ್ಡ ರೈತ ಸಂಘಟನೆಯಾದ ಬಿಕೆಯು ಸದಸ್ಯರು ಜಂತರ್ ಮಂತರ್ ತಲುಪಿದ್ದಾರೆ. ಕುಸ್ತಿಪಟುಗಳು ತಮ್ಮ ಮುಂದಿನ ನಡೆ ಬಗ್ಗೆ ನಿರ್ಧರಿಸಲು ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ಪ್ರತಿಭಟನೆ ಕೇವಲ ಮೂವರು ಕುಸ್ತಿಪಟುಗಳಿಗೆ ಸೀಮಿತವಾಗಿಲ್ಲ. ನಮ್ಮ ಮುಂದಿನ ನಡೆಯನ್ನು ತೀರ್ಮಾನಿಸಲು 2 ಸಮಿತಿ ರಚಿಸಿದ್ದೇವೆ’ ಎಂದಿದ್ದಾರೆ. ಮೊದಲ ಸಮಿತಿಯಲ್ಲಿ 31 ಸದಸ್ಯರಿದ್ದು, ಪ್ರತಿಭಟನೆಗೆ ಬೆಂಬಲ ನೀಡಿರುವ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳಿಗೆ ಸ್ಥಾನ ನೀಡಲಾಗಿದೆ. ಖಾಪ್ ಪಂಚಾಯತ್, ರೈತರು, ಮಹಿಳಾ ಸದಸ್ಯೆಯರು ಸಮಿತಿಯಲ್ಲಿರಲಿದ್ದಾರೆ. ಈ ಸಮಿತಿ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಗಳ ತೀರ್ಮಾನ ಕೈಗೊಳ್ಳಲಿದೆ. ಇನ್ನು 2ನೇ ಸಮಿತಿಯಲ್ಲಿ 9 ಸದಸ್ಯರಿದ್ದು, ಕುಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಈ ಸಮಿತಿ ಮಾಡಲಿದೆ ಎಂದು ಭಜರಂಗ್ ತಿಳಿಸಿದ್ದಾರೆ.