ಹೃದಯಾಘಾತದಿಂದ ಕರ್ತವ್ಯನಿರತ ವೀರಯೋಧ ಮರಣ

Advertisement

ಕೊಪ್ಪಳ(ಹನುಮಸಾಗರ): ಸಮೀಪದ ಹನುಮನಾಳ ಹತ್ತಿರದ ಕಡಿವಾಲ ಗ್ರಾಮದ ವೀರಯೋಧ ವೀರಪ್ಪ ಕರಿಯಪ್ಪ ಹಿರೇಹಾಳ(39) ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಪಂಜಾಬಿನ ಪತೀಂದ ಪ್ರದೇಶದ ಸೇನಾ ತುಕಡಿಯೊಂದರಲ್ಲಿ ಕರ್ತವ್ಯದಲ್ಲಿದ್ದ ಯೋಧ ವೀರಪ್ಪ ಅವರಿಗೆ ಮೇ 9ರಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ 20 ವರ್ಷಗಳಿಂದಲೂ ಭಾರತೀಯ ಸೇನೆಯಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರಪ್ಪ, ಕೊನೆಗೆ ಕರ್ತವ್ಯದಲ್ಲಿಯೇ ಕೊನೆಯುಸಿರೆಳೆದಿದ್ದು, ಗ್ರಾಮಸ್ಥರಲ್ಲಿ ಹಾಗೂ ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.
ಜಮ್ಮು ಕಾಶ್ಮೀರದ ಸಿಯಾಚಿನ್ ಪ್ರದೇಶದಲ್ಲಿ ವೃತ್ತಿ ಆರಂಭಿಸಿದ ಅವರು ಭಾರತದ ಬಹುತೇಕ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ನಡೆದಿದ್ದು, ಶುಕ್ರವಾರ ಅಂತ್ಯಕ್ರಿಯೆ ನೆರವೇರಲಿದೆ.