‘ಮಂಜುನಾಥನ ಕೃಪೆಯಿಂದ ಸಮಸ್ಯೆಗಳಿಂದ ಪಾರಾಗಿ ಬರುತ್ತೇನೆ’

Advertisement

ಮಂಗಳೂರು: ನನ್ನ ಮೇಲೆ ಶ್ರೀಮಂಜುನಾಥನ ಕೃಪೆಯಿದೆ. ನಾನು ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಿ ಬರುತ್ತೇನೆಂಬ ವಿಶ್ವಾಸವಿದೆ ಎಂದು ಕಲ್ಯಾನ ರಾಜ್ಯ ಪ್ರೆಗತಿ ಪಕ್ಷದ ನಾಯಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಜನಾರ್ದನ ರೆಡ್ಡಿಯವರಿಗೆ ಸೇರಿದ ೭೭ ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿರುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
‘ಈ ಹಿಂದೆ, ನನ್ನ ವಿರುದ್ಧ ೧೨೪ ಆಸ್ತಿಗಳನ್ನು ಪಟ್ಟಿ ಮಾಡಿ ಅವುಗಳನ್ನು ಸಿಬಿಐ ಅಕ್ರಮವೆಂದು ಹೆಸರಿಸಿತ್ತು. ಅಲ್ಲದೆ ಅವುಗಳ ಮುಟ್ಟುಗೋಲಿಗಾಗಿ ಅನುಮತಿ ಕೋರಿ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಅವುಗಳಲ್ಲಿ ೮೦ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು, ಆಗ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಆಸ್ತಿಗಳನ್ನು ಇತ್ತೀಚೆಗೆ ಮುಕ್ತಿಗೊಳಿಸಲಾಗಿದೆ. ಈಗ ಪುನಃ ೭೭ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದ್ದು, ಮುಂದೊಂದು ದಿನ ನಾನು ಈ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾದ ನಂತರ ಈ ಆಸ್ತಿಗಳನ್ನೂ ಸಿಬಿಐ ತನ್ನ ನಿರ್ಬಂಧದಿಂದ ತೆರವು ಮಾಡುತ್ತದೆ ಎಂಬ ವಿಶ್ವಾಸವಿದೆ. ನನಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷವಿದೆ. ದೇವರ ದಯೆಯಿಂದ ನನ್ನ ವಿರುದ್ಧದ ಪ್ರಕರಣಗಳಿಂದ ನಾನು ಮುಕ್ತನಾಗಿ ಹೊರಬರುತ್ತೇನೆಂಬ ವಿಶ್ವಾಸವಿದೆ” ಎಂದರು.