ಕೂದಲೆಳೆ ಅಂತರದಲ್ಲಿ ಬಚಾವ್ ಆದ ಶಾಸಕ..!

Advertisement

ಕುಂದಾಪುರ: ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಹಾಲಾಡಿ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು ಶಾಸಕರು ಆ ಮರವನ್ನು ತೆರವುಗೊಳಿಸುವಾಗ ಮತ್ತೊಂದು ಮರ ಬಿದ್ದು ಕೂದಲೆಳೆ ಅಂತರದಲ್ಲಿ ಬಚಾವ್ ಆದ ಘಟನೆ ಗುರುವಾರ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಉತ್ತಮ ಮಳೆ ಸುರಿಯುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಲ್ಲಿ ಮರಗಳು ಉರುಳಿ ಬೀಳುತ್ತಿವೆ. ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದ್ದು, ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ತಕ್ಷಣ ತಮ್ಮ ಬೆಂಬಲಿಗರ ಜೊತೆ ಸೇರಿ ಮರ ತೆರವು ಕಾರ್ಯಾಚರಣೆಗೆ ತೊಡಗಿದರು.
ಇದೇ ವೇಳೆ ಮತ್ತೊಂದು ಮರ ಉರುಳಿ ಬಿತ್ತು. ಅಪಾಯವನ್ನು ಅರಿತ ಶಾಸಕ ಗುರುರಾಜ್‌ ಗಂಟಿಹೊಳೆ ಹಾಗೂ ಬೆಂಬಲಿಗರು ಪಕ್ಕಕ್ಕೆ ಓಡುತ್ತಿದ್ದಂತೆಯೇ ಮರ ಧರೆಗುರುಳಿತು. ಅಪಾಯದ ಸುಳಿವರಿತ ಶಾಸಕರು ಮತ್ತು ಮರ ತೆರವು ಕಾರ್ಯದಲ್ಲಿ ಮಗ್ನರಾಗಿದ್ದ ಸಂಗಡಿಗರು ದೂರ ಓಡಿದ್ದರಿಂದ ಭಾರೀ ಅಪಾಯ ತಪ್ಪಿದಂತಾಗಿದೆ. ಸಮಾಜಸೇವೆಯ ಮೂಲಕವೇ ಪ್ರಸಿದ್ಧಿಯನ್ನು ಪಡೆದಿದ್ದ ಶಾಸಕ ಗಂಟಿಹೊಳೆ ಇದೀಗ ಶಾಸಕರಾದ ನಂತರವೂ ಜನಸಾಮಾನ್ಯರಂತೆಯೇ ಬದುಕುತ್ತಿದ್ದಾರೆ. ಶಾಸಕರಾದರೂ ಕೂಡ ತಾವೇ ಸ್ವತಃ ಮರ ತೆರವು ಕಾರ್ಯಕ್ಕೆ ಕೈಜೋಡಿಸುವ ಮೂಲಕ ಶಾಸಕರು ಇತರರಿಗೆ ಮಾದರಿಯಾಗಿದ್ದಾರೆ.