ಹೊಸ ದಿಕ್ಸೂಚಿ ಇಲ್ಲದೆ ಕವಲು ದಾರಿಯಲ್ಲಿ ಸರ್ಕಾರ

cm
Advertisement

ಬೆಂಗಳೂರು: ರಾಜ್ಯಪಾಲರ ಭಾಷಣ ಸಪ್ಪೆಯಾಗಿದ್ದು ಯಾವುದೇ ಜೀವಾಳ ಇಲ್ಲ. ಹೊಸ ಸರ್ಕಾರ ಬಂದಾಗ, ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಸರ್ಕಾರ ಕವಲು ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಭರವಸೆ ಮೂಡುವಂತಹ ಯಾವುದೇ ಭಾಷಣ ಇಲ್ಲ. ಸುಳ್ಳಿನ ಕಂತೆ ಅಂತ ಸಾಭಿತಾಗಿದೆ. ಅಕ್ಕಿಯನ್ನು 10 ಕೆಜಿ ಕೊಡುತ್ತೇವೆ ಅಂತ ಸಹಿ ಮಾಡಿ ಹೇಳಿದ್ದರು. ಈಗ ಕೇಂದ್ರ ಅಂತ ಹೇಳದೆ ಆಹಾರ ಭದ್ರತೆಯಲ್ಲಿ ಕೊಡುತ್ತೇವೆ ಅಂತಿದ್ದಾರೆ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಹೇಳಲು ಅವರಿಗೆ ನಾಚಿಕೆಯಾಗಿದೆ ಅಂತ ವಾಗ್ದಾಳಿ ನಡೆಸಿದರು.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿದ್ದರು. ಆದರೆ, ಈಗ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಜನರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ. ಜವಾಬ್ದಾರಿಯಿಂದ ನುಸುಳಿಕೊಳ್ಳುತ್ತಿರುವ ಸರ್ಕಾರ ಇದು. ಅರ್ಥವಿಲ್ಲದೆ ಸುಮ್ಮನೆ ಬೊಗಳೆ ಭಾಷಣ ಮಾಡಿಸಿದ್ದಾರೆ. ಈ ಸರ್ಕಾರಕ್ಕೆ ಅಭಿವೃದ್ಧಿಯ ಚಿಂತನೆಯಿಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರ ಬೆಂಕಿ ಇಲ್ಲದೆ ಹೊಗೆಯಾಡಲ್ಲ: ಇನ್ನು ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ‌ ಕೇಳಿದ್ದಾರೆ, ಅಲ್ಲಿ ಕೋಟ್ಯಾಂತರ ರೂಪಾಯಿ ಕೇಳುತ್ತಿದ್ದಾರೆ. ವರ್ಗಾವಣೆ ರದ್ದು ಆಗುವುದು, ಮತ್ತೆ ಅಧಿಕಾರಿ ಬಂದು ವರ್ಗಾವಣೆ ಮಾಡಿಸುವುದು. ಐಎಎಸ್‌, ಐಪಿಎಸ್ ಅಧಿಕಾರಿಗಳ ಮಾತೆ ಸ್ಪಷ್ಟವಾದ ಸಾಕ್ಷಿ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ‌ ಸಿಎಂ ಸಿದ್ದರಾಮಯ್ಯನವರು ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ. ಸಿಎಂ ಕಚೇರಿ ನಡೆದುಕೊಳ್ಳುವ ರೀತಿ ನೋಡಿದರೆ ಭಯ ಆಗುತ್ತಿದೆ ಎಂದು ಹೇಳಿದರು.
ನಮ್ಮಲ್ಲಿ ಎಲ್ಲರೂ ಸಮರ್ಥರು : ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ತಿರುಗೇಟು ನೀಡಿದ ಅವರು, ಇಲ್ಲಿ ಶಿಸ್ತಿನ ಪ್ರಶ್ನೆ ಇಲ್ಲ‌ ನಾಳೆಯಿಂದ ಅಧಿವೇಶನ ಅಧಿಕೃತವಾಗಿ ಆರಂಭವಾಗಲಿದೆ. ಅಷ್ಟರೊಳಗೆ ವಿಪಕ್ಷನಾಯಕನ ಆಯ್ಕೆಯಾಗಲಿದೆ‌. ಪ್ರತಿಪಕ್ಷದ ನಾಯಕನಾಗಲು ನಮ್ಮಲ್ಲಿರುವ 66 ಜನರು ಸಮರ್ಥರಿದ್ದಾರೆ ಎಂದರು.
ಬಿಟ್ ಕಾಯಿನ್ ಪ್ರಕರಣ ಎಸ್‌ಐಟಿಗೆ ವಹಿಸಿರುವುದು ಒಳ್ಳೆದಾಯಿತು. ಸರ್ಕಾರ ಯಾವುದೇ ರೂಪದಲ್ಲಿ ತನಿಖೆ ಮಾಡಿಸಲಿ ಎಂದು ಹೇಳಿದರು.