ಬಸವಕಲ್ಯಾಣ (ಬೀದರ್) : ಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮುಸ್ಲಿಂ ಧರ್ಮದ ಓರ್ವನ ಮನೆಗೆ ತೆರಳಿ ದಾಂಧಲೆ ನಡೆಸಿದ ಮತ್ತು ಆ ಸಮುದಾಯದ ಜನರಿಗೆ ಧಮ್ಕಿ ಹಾಕಿದ ಆರೋಪದ ಮೇರೆಗೆ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಅವರನ್ನೊಳಗೊಂಡಂತೆ ೯ ಜನರ ವಿರುದ್ಧ ಇಲ್ಲಿಯ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಕ್ರೀದ್ ವೇಳೆ ಶಾಸಕ ಸಲಗರ್ ಹಾಗೂ ಅವರ ಬೆಂಬಲಿಗರು ನಮ್ಮ ಮನೆಗೆ ಅಕ್ರಮ ಪ್ರವೇಶಿಸಿ ಮತ್ತು ನಮ್ಮ ಕುಟುಂಬಕ್ಕೆ ನಿಂದಿಸಿದಲ್ಲದೆ ನಮಗೆ ಮತ್ತು ಸಮಾಜಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಇಲ್ಲಿಯ ಹಿರೇಮಠ ಕಾಲೋನಿಯ ಮೆಹರಾಜ್ ಇನಾಮುಲ್ಲಾಖಾನ್ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜುಲೈ ೧ ರಂದು ಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಶಾಸಕ ಶರಣು ಸಲಗರ್ ಕಾಲೋನಿಗೆ ತೆರಳಿ ಗೋಹಂತಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದುದು `ಇಲ್ಲಿ ಉಲ್ಲೇಖನೀಯ’.