ಗಡ್ಕರಿಗೆ ಬೆದರಿಕೆ ಹಾಕಿದವನಿಗೆ ಉಗ್ರರ ನಂಟು..!

Advertisement

ಬೆಳಗಾವಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿಯು ಉಗ್ರ ಅಫ್ಸರ್ ಪಾಷಾ ಜತೆ ನಂಟಿರುವ ಬಗ್ಗೆ ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಜಯೇಶ್ ಪೂಜಾರಿಯು ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದಾಗ ಪಾಷಾ ಜತೆಗೆ ಬೆಳಗಾವಿ ಜೈಲಿನಲ್ಲಿದ್ದನು. ಇದು ಭಯೋತ್ಪಾದಕರ ಕುಮ್ಮಕ್ಕಿನ ಮೇಲೆ ನಡೆದ ಬೆದರಿಕೆಯೇ ಎಂಬ ಕುರಿತು ತನಿಖೆ ನಡೆಸಲಾಗಿತ್ತು.
ಕೇಂದ್ರ ಸಚಿವ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹಾರಾಷ್ಟ್ರದ ನಾಗ್ಪುರ ಎಟಿಎಸ್ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಮಂಗಳೂರು ಮೂಲದ ಜಯೇಶ ಪೂಜಾರಿ ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಜ. 14ರಂದು ಕರೆ ಮಾಡಿ, 100 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಮತ್ತು ಮಾ. 21ರಂದು ಎರಡನೇ ಬಾರಿಗೆ ೧೦ ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಒಂದು ವೇಳೆ ಹಣ ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು.