ಜಲಪಾತಗಳ ವೀಕ್ಷಣೆಗೆ ವಿಶೇಷ ಬಸ್

Advertisement

ಹುಬ್ಬಳ್ಳಿ: ಇತ್ತೀಚೆಗೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತಗಳ ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವಾರು ಜಲಪಾತಗಳು ಮೈದುಂಬಿ ಕೊಂಡಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾರಾಂತ್ಯ ಹಾಗೂ ರಜೆ ದಿನಗಳಂದು ಹುಬ್ಬಳ್ಳಿಯಿಂದ ಜೋಗ ಫಾಲ್ಸ್‌ಗೆ, ಧಾರವಾಡದಿಂದ ಗೋಕಾಕ್ ಫಾಲ್ಸ್ ಮತ್ತು ದಾಂಡೇಲಿಗೆ ಹಾಗೂ ಬೆಳಗಾವಿಯಿಂದ ಅಂಬೋಲಿ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ರವಿವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಈ ಬಸ್‌ಗಳ ಸೇವೆ ಲಭ್ಯವಿದೆ. ಒಂದೇ ದಿನದಲ್ಲಿ ಎರಡರಿಂದ ನಾಲ್ಕು ಸ್ಥಳಗಳ ವೀಕ್ಷಣೆಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ಮಿತವ್ಯಯಕರ ಪ್ರಯಾಣ ದರ ನಿಗದಿಪಡಿಸಲಾಗಿದೆ.

ಹುಬ್ಬಳ್ಳಿ-ಜೋಗ್ ಫಾಲ್ಸ್
ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ರಾಜಹಂಸ ಬಸ್ಸು ಬೆಳಗ್ಗೆ 7:45 ಕ್ಕೆ ಹೊರಡುತ್ತದೆ. ರಾತ್ರಿ 9:30ಕ್ಕೆ ಹಿಂದಿರುಗುತ್ತದೆ ಪ್ರಯಾಣ ದರ ರೂ. 450. ವೋಲ್ವೋ ಎಸಿ ಬಸ್ಸು ಬೆಳಗ್ಗೆ 8 ಕ್ಕೆ ಹೊರಡುತ್ತದೆ. ರಾತ್ರಿ 9ಕ್ಕೆ ಹಿಂದಿರುತ್ತದೆ ಪ್ರಯಾಣ ದರ ರೂ.600. ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ 7760991674 / 7760991682 ಕ್ಕೆ ಸಂಪರ್ಕಿಸಬಹುದು.

ಧಾರವಾಡ-ದಾಂಡೇಲಿ, ಉಳವಿ
ವೇಗದೂತ ಬಸ್ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ. ದಾಂಡೇಲಿ ಮೊಸಳೆ ಪಾರ್ಕ್, ಮೌಲಂಗಿ ಫಾಲ್ಸ್, ಕೂಳಗಿ ನೇಚರ್ ಪಾರ್ಕ್ ಹಾಗೂ ಉಳವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 7 ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.340.

ಧಾರವಾಡ-ಗೋಕಾಕ್ ಫಾಲ್ಸ್
ವೇಗದೂತ ಬಸ್ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ. ನವಿಲು ತೀರ್ಥ ಡ್ಯಾಮ್, ಗೋಕಾಕ್ ಫಾಲ್ಸ್ ಹಾಗೂ ಹಿಡಕಲ್ ಡ್ಯಾಮ್ ವೀಕ್ಷಣೆ ಮುಗಿಸಿಕೊಂಡು ಧಾರವಾಡಕ್ಕೆ ಸಂಜೆ 7ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.340.
ಹೆಚ್ಚಿನ ಮಾಹಿತಿಗೆ 9148266332 / 7760982552 ಕ್ಕೆ ಸಂಪರ್ಕಿಸಬಹುದು.

ಬೆಳಗಾವಿ-ಗೋಕಾಕ್ ಫಾಲ್ಸ್
ವೇಗದೂತ ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಡುತ್ತದೆ. ಹಿಡಕಲ್ ಡ್ಯಾಮ್, ಗೋಡಚಿನಮಕ್ಕಿ ಹಾಗೂ ಗೋಕಾಕ್ ಫಾಲ್ಸ್ ವೀಕ್ಷಣೆ ಮುಗಿಸಿಕೊಂಡು ಸಂಜೆ 6 ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ. 190.

ಬೆಳಗಾವಿ-ಅಂಬೋಲಿ ಫಾಲ್ಸ್
ವೇಗದೂತ ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9ಗಂಟೆಗೆ ಹೊರಡುತ್ತದೆ. ನಾಗರತಾಸ್ ಫಾಲ್ಸ್ ಹಾಗೂ ಅಂಬೋಲಿ ಫಾಲ್ಸ್ ವೀಕ್ಷಣೆ ಮುಗಿಸಿಕೊಂಡು ಸಂಜೆ 6ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.290.
ಹೆಚ್ಚಿನ ಮಾಹಿತಿಗೆ 7760991612/ 7760991613 / 7760991625 ಕ್ಕೆ ಸಂಪರ್ಕಿಸಬಹುದು.

ಈ ವಿಶೇಷ ಬಸ್ಸುಗಳಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ.

ಮುಂಗಡ ಟಿಕೆಟ್ ಬುಕ್ಕಿಂಗ್
ಬಸ್ ನಿಲ್ದಾಣಗಳಲ್ಲಿ, ಅವತಾರ್ ಕೌಂಟರ್ ಗಳಲ್ಲಿ, KSRTC Mobile App ಹಾಗೂ ವೆಬ್‌ಸೈಟ್ www.ksrtc.in ನಲ್ಲಿ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.