ಕತ್ತರಿಯಿಂದ ಯುವಕನಿಗೆ ಇರಿತ

ಹಲ್ಲೆ
Advertisement

ಹುಬ್ಬಳ್ಳಿ: ವ್ಯಕ್ತಿಯೋರ್ವನಿಗೆ ಕ್ಷುಲ್ಲಕ ಕಾರಣಕ್ಕಾಗಿ ಕತ್ತರಿಯಿಂದ ಬೆನ್ನಿಗೆ ಚುಚ್ಚಿರುವ ಘಟನೆ ನಗರದ ಆನಂದನಗರದಲ್ಲಿ ಕಳೆದ ರಾತ್ರಿ ನಡೆದಿದೆ. ಇಲ್ಲಿನ ಬಾರ್ ಅಂಗಡಿವೊಂದರಲ್ಲಿ ಮಂಜುನಾಥ ಪವಾರ್ ಅಲಿಯಾಸ್ ಮಂಜ್ಯಾ ಹಾಗೂ ಪ್ರದೀಪ್ ಮದ್ಯಪಾನ ಮಾಡಿದ್ದಾರೆನ್ನಲಾಗಿದ್ದು, ತದನಂತರ ಆನಂದನಗರದಲ್ಲಿನ ಲಕ್ಷ್ಮೀ ಹಾರ್ಡ್‌ವೇರ್ ಹತ್ತಿರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪ ಹೋದ ಸಂದರ್ಭದಲ್ಲಿ ಮಂಜುನಾಥ ಪವಾರ್ ಕತ್ತರಿಯಿಂದ ಪ್ರದೀಪನ ಬೆನ್ನಿನ ಭಾಗಕ್ಕೆ ಚುಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಲ್ಲೆ ಮಾಡಿದ ಮಂಜುನಾಥನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.