ನಾನು ಕಾರಜೋಳ ಒಂದೇ….

Advertisement

ವಿಜಯಪುರ: `ನಾನು ಕಾರಜೋಳ ಒಂದೇ, ಅವರು ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಯಾವ ಇಂಗಿತ ವ್ಯಕ್ತಪಡಿಸಿಲ್ಲ. ಒಂದು ವೇಳೆ ಸಂದರ್ಭ ಬಂದರೆ ನಾನು ಅವರು ಕುಳಿತು ಮಾತನಾಡುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಲೋಕಸಭಾ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಎಲ್ಲೂ ಹೇಳಿಲ್ಲ, ಅವರು ಹಾಗೂ ನಾನು ಬೇರೆ ಅಲ್ಲ, ಒಂದು ವೇಳೆ ನಿಲ್ಲುತ್ತಾರೆ ಎಂದರೆ ನಿಲ್ಲಲ್ಲಿ, ಹಾಗೇನಿದ್ದರೂ ನಾವಿಬ್ಬರು ಕುಳಿತು ಮಾತನಾಡುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಬಂದು ನಿಲ್ಲಲ್ಲಿ, ಅನೇಕ ಘಟಾನುಘಟಿಗಳನ್ನು ಸೋಲಿಸಿದ್ದೇನೆ, ಜನತೆ ಆಶೀರ್ವಾದ ನನ್ನೊಂದಿಗೆ ಇದ್ದೇ ಇದೆ ಎಂದರು.
ನಕಲಿ ಪತ್ರ ಇರಬಹುದು…
ವಜ್ರಹನುಮಾನ ಬಳಿ ಅಂಡರಪಾಸ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇಲಾಖಾ ಅಧಿಕಾರಿಗಳು ಆರ್‌ಓಬಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದಾರೆ. ಈ ಬಗ್ಗೆ ನಾನು ಪತ್ರವೇ ನೀಡಿಲ್ಲ. ಆದರೂ ಸಹ ಪತ್ರ ಸೃಷ್ಟಿಯಾಗಿದೆ. ಆ ಪತ್ರ ನಕಲಿಯೋ ಅಸಲಿಯೋ ಗೊತ್ತಿಲ್ಲ. ನಾನಂತೂ ಪತ್ರ ಕೊಟ್ಟಿಲ್ಲ. ಈ ಬಗ್ಗೆ ಮುಂದೆ ನೋಡೊಣ ಎಂದಷ್ಟೇ ಹೇಳಿದ ಜಿಗಜಿಣಗಿ, ವಜ್ರಹನುಮಾನದಲ್ಲಿ ಅಂಡರ್‌ಪಾಸ್ ನಿರ್ಮಿಸಿದರೆ ಸೂಕ್ತ. ಹೀಗಾಗಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು ಹೊರತು ಆರ್‌ಓಬಿ ಅಲ್ಲ ಎಂದರು.