ಎರಡೂವರೆ ವರ್ಷದ ಬಳಿಕ ಪೂರ್ತಿ ಟೀಂ ಬದಲಾಗಲಿದೆ

Advertisement

ವಿಜಯಪುರ: ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುತ್ತಿರುವ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎರಡೂವರೆ ವರ್ಷದ ಬಳಿಕ ಟೀಂ ಪೂರ್ತಿ ಬದಲಾಗಲಿದೆ ಎನ್ನುವ ಮೂಲಕ ಧಾರವಾಡ ಗ್ರಾಮೀಣ ಮತಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷ ಆದ ಮೇಲೆ ಸಚಿವರು ಬದಲಾವಣೆ ಆಗೋಣ, ಹೊಸಬರಿಗೆ ಅವಕಾಶ ಕೊಡೋಣ ಎಂದು ಸಚಿವ ಮುನಿಯಪ್ಪ ಅವರ ಹೇಳಿಕೆ ಸಂತೋಷ ತರಿಸಿದೆ ಎಂದರು.
ನಿಗಮ ಮಂಡಳಿಗಳಿಗೆ ೩೦ ಶಾಸಕರಂತೆ ಎರಡು ಬಾರಿ ಆದ ರೀತಿಯಲ್ಲೇ ಎರಡು ಬಾರಿ ಸಚಿವರು ಬದಲಾವಣೆ ಆದರೆ ನಮ್ಮ ಎಲ್ಲ ಶಾಸಕರಿಗೂ ಅಧಿಕಾರ ದೊರಕಲಿದೆ. ಟೋಟಲ್ ಟೀಂ ಬದಲಾವಣೆಯಾಗಬೇಕು. ಇನ್ನೂ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಷಯ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಬಿಜೆಪಿ ಮಾಜಿ ಶಾಸಕರು ಬರುವುದು ನಿಶ್ಚಿತ…
ಬಿಜೆಪಿ ವಲಯದಲ್ಲಿ ಅನೇಕ ಶಾಸಕರಿಗೆ ಅಸಮಾಧಾನ ಇರುವುದು ನಿಜ, ಹಾಲಿ ಶಾಸಕರ ಜೊತೆಗೆ ಕೆಲ ಮಾಜಿ ಶಾಸಕರು ಅಸಮಾಧಾನಗೊಂಡಿದ್ದಾರೆ. ಕಳೆದ ಬಾರಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಂಭವ ಇದೆ ಎನ್ನುವ ಕ್ಷಿಪ್ರ ರಾಜಕೀಯ ಕ್ರಾಂತಿಯ ಸಂಭವವನ್ನು ಕೂಡಾ ಕುಲಕರ್ಣಿ ಹೇಳಿದರು.
೧೩ ರಿಂದ ೧೪ ಮಾಜಿ ಶಾಸಕರು ಬರುವ ನಿರೀಕ್ಷೆ ಇದೆ. ಆದರೆ ಹಾಲಿ ಶಾಸಕರ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ ಎಂದರು.
ಎಲ್ಲರೂ ಸೂಪರ್…
ಡಿ.ಕೆ. ಶಿವಕುಮಾರ ಸೂಪರ್ ಸಿಎಂ ಎನ್ನುವ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಕುಲಕರ್ಣಿ, ಎಲ್ಲಾ ಇಲಾಖೆಯ ಮಂತ್ರಿಗಳು ಸಮರ್ಥರಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ಇಲಾಖೆಯಲ್ಲೂ ಅಸಮರ್ಥರಿಲ್ಲ, ಹೀಗಾಗಿ ಅವರು ಸೂಪರ್ ಇವರು ಸೂಪರ್ ಎನ್ನುವ ಮಾತಿಲ್ಲ. ಅವರಿಗೆ ಆ ಕೆಪ್ಯಾಸಿಟಿ ಇದೆ, ಅನುಭವ ಇದೆ. ಎಲ್ಲರೂ ಸೂಪರ್ ಎಂದರು.