ತಮಿಳುನಾಡಿಗೆ ನೀರು ಆದೇಶ ಹಿನ್ನೆಲೆ : ಹೆದ್ದಾರಿ ತಡೆದು‌ ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ನಿರ್ವಹಣಾ ಮಂಡಳಿಯ ಆದೇಶವನ್ನು ಖಂಡಿಸಿ, ಶ್ರೀರಂಗಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ರೈತ ಮುಖಂಡರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.


ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ‌ ನಿರ್ಮಿಸಿ ಪ್ರತಿಭಟಿಸಿದ ನೂರಾರು ರೈತರು, ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ರಾಜ್ಯ ಸರ್ಕಾರ‌ ಹಾಗೂ‌ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಜಲಾಯನ ಪ್ರದೇಶದಲ್ಲಿ‌ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗದೆ, ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗದೆ ಇರುವ ನೀರು ಖಾಲಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದ್ದು ಬೆಳೆದು ನಿಂತ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಟ್ಟು ನೀರಿಗೆ ಮೊರೆ ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕೇಂಬ ಕಾವೇರಿ ನಿರ್ವಹಣಾ ಮಂಡಳಿಯ ತೀರ್ಪು ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕೇಂದ್ರ ಸರ್ಕಾರ ಕೂಡಲೇ ಮದ್ಯ ಪ್ರವೇಶಿಸಿ ಸಂಕಷ್ಡ ಸೂತ್ರದನ್ವಯ ರಾಜ್ಯದ ಪರ ನಿಲ್ಲಬೇಕು. ರಾಜ್ಯದ ಶಾಸಕರು ಹಾಗೂ ಸಂಸದರು ತಮಿಳುನಾಡು ಸರ್ಕಾರ ಹಾಗೂ ಪ್ರಾಧಿಕಾರದ‌ ವಿರುದ್ದ ಧ್ವನಿಯೆತ್ತಿ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ರಸ್ತೆ ತಡೆಯಲ್ಲಿ‌ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ಮಂಡ್ಯ ರಕ್ಷಣಾ ವೇಧಿಕೆ ಸಂಸ್ಥಾಪಕ‌ ಅಧ್ಯಕ್ಷ ಶಂಕರ್ ಬಾಬು, ದಲಿತ ಸಂಘಟನೆಯ ಗಂಜಾಂ ರವಿಚಂದ್ರ, ಉಗಮ ಚೇತನ ಟ್ರಸ್ಟ್ ಪ್ರಿಯಾ ರಮೇಶ್ ಸೇರಿದಂತೆ‌‌ ನೂರಾರು ರೈತ ಮುಖಂಡರು ಭಾಗವಹಿಸಿದ್ದರು.