ಹರಪನಹಳ್ಳಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಕೋಟ್ಯಂತರ ಹಣ ವಂಚಿಸಿರುವ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಸಿಸಿಬಿ ವಶದಲ್ಲಿದ್ದು ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಗೌಪ್ಯವಾಗಿ ವಿಚಾರಣೆ ನಡೆಸುತ್ತಿರುವುದು ಗುರುವಾರ ಸಂಜೆ ಕಂಡುಬಂದಿದೆ.
ಸಿಸಿಬಿ ಅಧಿಕಾರಿಗಳು ಪ್ರವಾಸಿ ಮಂದಿರದೊಳಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಅವರಿಗೆ ಬೇಕಾದ ತಿಂಡಿ ತಿನಿಸು ಹಾಗೂ ಊಟೋಪಚಾರಗಳನ್ನು ಜವಾನರಿಂದ ತರಿಸಿಕೊಳ್ಳುತ್ತಿದ್ದಾರೆ. ಜವಾನರನ್ನು ಕೊಣೆಯೊಳಗೆ ಬಿಟ್ಟುಕೊಳ್ಳದೇ ಬಾಗಿಲ್ಲಲ್ಲೇ ಕಾಫಿ, ಟೀ ಫ್ಲಾಸ್ಕ್ ಹಾಗೂ ಕ್ಯಾರಿಯರ್ಗಳು ತೆಗೆದುಕೊಂಡು ಕಳಿಸುತ್ತಾರೆ. ಕೊಣೆಯಿಂದ ಹೊರಬರುವಾಗ ಅಥವಾ ಒಳ ಹೋಗುವಾಗ ಹಾಲಶ್ರೀಗಳ ಮುಖಕ್ಕೆ ಶಾಲು ಹೊದಿಸಿ ಕಾರು ಹತ್ತಿಸುತ್ತಿರುವ ದೃಶ್ಯ ಮಾತ್ರ ಕಾಣುತ್ತದೆ. ಸ್ಥಳೀಯರಿಗೂ ಯಾವುದೇ ಮಾಹಿತಿಯಿಲ್ಲ. ಬುಧವಾರ ರಾತ್ರಿ ಆಗಮಿಸಿದ ಸಿಸಿಬಿ ತಂಡ ಗುರುವಾರ ಸಂಜೆವರೆಗೂ ಹರಪನಹಳ್ಳಿ ಪ್ರವಾಸಿ ಮಂದಿರದಲ್ಲೇ ಬೀಡುಬಿಟ್ಟಿದ್ದರು.