ರಷ್ಯನ್ ಬಾಲಕನಿಗೆ ಲಿಂಗದೀಕ್ಷೆ ನೀಡಿದ ಕಾಶಿ ಶ್ರೀಗಳು

Advertisement

ಹುಬ್ಬಳ್ಳಿ: ರಷ್ಯಾದ ಮಾಸ್ಕೋ ನಿವಾಸಿ ಪಾರ್ವತಿ ಅವರ ಪುತ್ರ ಆ್ಯಂಡ್ರೆ ಎಂಬ ೮ ವರ್ಷದ ಬಾಲಕನಿಗೆ ಕಾಶಿ ಜ್ಞಾನಪೀಠದ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ದೀಕ್ಷೆ ನೀಡಿದರು.
ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ಸಹಸ್ರಾರು ಜನರು ಕಾಶಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು. ಈ ಪೈಕಿ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಪಡೆದಿದ್ದ ರಷ್ಯಾದ ಪಾರ್ವತಿ (ಹೆಸರು ಬದಲಿಸಿದೆ) ಎಂಬುವವರು ನಿತ್ಯವೂ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇದರಿಂದ ಪ್ರಭಾವಿತನಾದ ಆ್ಯಂಡ್ರೆ, ಲಿಂಗ ದೀಕ್ಷೆ ಕೊಡಿಸುವಂತೆ ಪಟ್ಟು ಹಿಡಿದಿದ್ದನಂತೆ. ಹೀಗಾಗಿ, ಪಾಲಕರು ಕಾಶಿ ಪೀಠದಲ್ಲಿ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ.
ಇಷ್ಟಲಿಂಗ ದೀಕ್ಷೆ ಕರುಣಿಸಿದ ಬಳಿಕ ಕಾಶಿ ಜ್ಞಾನ ಪೀಠದ ಜಗದ್ಗುರು ಆ್ಯಂಡ್ರೆಗೆ `ಗಣೇಶ’ ಎಂದು ಮರು ನಾಮಕರಣ ಮಾಡಿದರು. ಮಹಾರಾಷ್ಟ್ರ ರಾಜ್ಯದ ದಹಿವಡಕರ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಗಣೇಶನಿಗೆ ಮಂತ್ರೋಪದೇಶ ಮಾಡಿದರು. ರಷ್ಯಾದಿಂದ ಆಗಮಿಸಿದ್ದ ಬಾಲಕನ ಪಾಲಕರು ಹಾಗೂ ಬಂಧುಗಳು ಇದ್ದರು.