ಬೆಂಗಳೂರು: 150ಕ್ಕೂ ಹೆಚ್ಚು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ, ನಮ್ಮ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಯಶವಂತಪುರ, ಪದ್ಮನಾಭನಗರ, ರಾಜರಾಜೇಶ್ವರಿನಗರ, ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ, ಜೆಡಿಎಸ್ನ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಪ್ರಾರಂಭವಾದ ನಂತರ ಕೆಲವರು ನೊಂದು ಆ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಮೈತ್ರಿಯನ್ನು ವಿರೋಧಿಸಿ ಹೊರಗಡೆ ಬರುವವರು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡರೆ ಅವರನ್ನು ಗೌರವದಿಂದ ಪಕ್ಷಕ್ಕೆ ಸ್ವಾಗತಿಸಿ ಎಂದು ರಾಜ್ಯದ ಆಯಾ ಜಿಲ್ಲಾ ನಾಯಕರಿಗೆ, ಸಚಿವರಿಗೆ, ಜಿಲ್ಲಾಧ್ಯಕ್ಷರಿಗೆ, ಬ್ಲಾಕ್ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದರು.