ಬೆಳಗಾವಿ ಗ್ಯಾಂಗ್‌ನಿಂದ ಸರ್ಕಾರ ಬೀಳಲ್ಲ

Advertisement

ದಾವಣಗೆರೆ: ಬೆಳಗಾವಿಯ ಗ್ಯಾಂಗ್‌ನಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪತನಗೊಳ್ಳುತ್ತ ಎಂಬುದೆಲ್ಲಾ ಕನಸಿನ ಮಾತು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬೆಳಗಾವಿ ಗ್ಯಾಂಗ್‌ನಿಂದ ಪತನಗೊಳ್ಳುತ್ತದೆ ಎಂಬುದು ಅದೊಂದು ರೀತಿ ಹೋರಿ ಮತ್ತು ನರಿ ಕಥೆಯಂತೆ ಅಷ್ಟೇ ಮುಂದೆ ಹೊರಟಿದ್ದ ಹೋರಿ, ಹಿಂದೆ ಬರುತ್ತಿದ್ದ ನರಿ ಕಥೆಯಂತೆ ಸರ್ಕಾರ ಇವಾಗ ಬೀಳುತ್ತೆ, ಆಮೇಲೆ ಬೀಳುತ್ತದೆಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರಷ್ಟೇ ಎಂದರು.
ಅವಧಿಗೆ ಮುನ್ನವಂತೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಸರ್ಕಾರ ಅಲ್ಲಾಡುತ್ತಿದೆಯೆಂದು ಬಿಜೆಪಿಯವರು ಹೇಳುತ್ತಿರುತ್ತಾರೆ. ಸರ್ಕಾರ ಅಲ್ಲಾಡುತ್ತದೆಂದು ಬಿಜೆಪಿಯವರು ನೋಡುತ್ತಲೇ ಇರುತ್ತಾರೆ. ನಮ್ಮ ಸರ್ಕಾರವಂತೂ ಬೀಳುವುದಿರಲಿ, ಅಲ್ಲಾವುಡೂ ಇಲ್ಲ ಎಂದು ಅವರು ಪುನರುಚ್ಛರಿಸಿದರು.
ದಾವಣಗೆರೆ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಸೂಕ್ತ ನಿರ್ದೇಶನಗಳನ್ನೂ ನೀಡಿದ್ದೇವೆ ಎಂದು ಅವರು ತಿಳಿಸಿದರು.