ವಾಂಖೆಡೆ ಕ್ರೀಡಾಂಗಣದಲ್ಲಿ ಅನಾವರಣಗೊಂಡ ಸಚಿನ್ ಪ್ರತಿಮೆ

Advertisement

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿಗೆ ಹಲವಾರು ದಾಖಲೆಗಳಿದ್ದು, ಅವರಾಡಿದ ಪ್ರತಿ ಮೈದಾನಗಳೂ ದಾಖಲೆಗಳ ಗೂಡೇ ಆಗಿವೆ. ಸಚಿನ್ ಇಷ್ಟಪಡುವ ಮತ್ತು ತವರು ಮೈದಾನವಾದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ `ತದ್ರೂಪಿ ಲಿಟಲ್ ಮಾಸ್ಟರ್’ ಪ್ರತಿಮೆ ಇಂದು ಅನಾವರಣಗೊಂಡಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ಭಾರತ-ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಅನಾವರಣ ಮಾಡಿದ್ದು. ಪ್ರತಿಮೆಯು ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ, ದಿವಂಗತ ಶೇನ್ ವಾರ್ನ್ ಅವರ ಎಸೆತವನ್ನು ಸಿಕ್ಸರ್ ಬಾರಿಸುತ್ತಿರುವ ಮಾದರಿಯಲ್ಲಿ ತೆಂಡೂಲ್ಕರ್ ಅವನ್ನು ತೋರಿಸಲಾಗಿದೆ. ಪ್ರತಿಮೆ ೨೨ ಅಡಿ ಉದ್ದವಿದ್ದು, ಹೆಸರಾಂತ ಚಿತ್ರಕಲಾವಿದ, ಶಿಲ್ಪಿ ಪ್ರಮೋದ್ ಕಾಳೆ ಅವರು ನಿರ್ಮಿಸಿದ್ದಾರೆ. ಬುಧವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ.
ಸಚಿನ್ ಪ್ರತಿಯೊಬ್ಬ ಉದಯೋನ್ಮುಖ ಕ್ರಿಕೆಟಿಗನಿಗೆ ಸ್ಫೂರ್ತಿ. ಅವರ ೫೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಮತ್ತು ಇಡೀ ಪ್ರಪಂಚದ ಅಭಿಮಾನಿಗಳಿಗೆ ಸಂದೇಶ ರವಾನಿಸಲು ಬಯಸಿದ್ದೆವು. ಅದರಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದು ಭವಿಷ್ಯದ ಕ್ರಿಕೆಟ್ ಪೀಳಿಗೆಯನ್ನು ಪ್ರೇರೇಪಿಸುತ್ತದೆ. ಮುಂದೆ ಇದು ಸಚಿನ್ ಮತ್ತು ಮುಂಬೈ ಕ್ರಿಕೆಟ್‌ನ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಕಾರ್ಯದರ್ಶಿ ಅಜಿಂಕ್ಯಾ ನಾಯಕ್ ಹೇಳಿದ್ದಾರೆ.