2040ರ ಹೊತ್ತಿಗೆ ಭಾರತ ಬಾಹ್ಯಾಕಾಶದ ಚಕ್ರವರ್ತಿ

Advertisement

ಮುಧೋಳ: 2035ಕ್ಕೆ ನಮ್ಮದೆ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿ 2040ಕ್ಕೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸಲಿದ್ದೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ)ದ ಲೀಕ್ವಿಡ್ ಪ್ರಪಲ್ಶನ್ ಕೇಂದ್ರದ ನಿರ್ದೇಶಕ ಡಾ. ವಿ. ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬಿವಿವಿ ಸಂಘದ ಸ್ಥಳೀಯ ಬೀಳೂರು ಗುರುಬಸವ ಮಹಾಸ್ವಾಮೀಜಿ ತಾಂತ್ರಿಕ ಕಾಲೇಜಿನಲ್ಲಿ ಇಸ್ರೊದ ಲೀಕ್ವಿಡ್ ಪ್ರಪಲ್ಶನ್‌ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಲಾದ “ಅಂತರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ-೨೦೨೩”ದಲ್ಲಿ ಮಾತನಾಡಿ, 2025ರಿಂದ ಆರಂಭಿಸಿ 2040ರ ಹೊತ್ತಿಗೆ ಭಾರತವನ್ನು ಬಾಹ್ಯಾಕಾಶದ ಚಕ್ರವರ್ತಿಯನ್ನಾಗಿಸುವ ಸಂಕಲ್ಪವನ್ನು ಮಾಡಿದ್ದೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಚಂದ್ರಯಾನ 3ರ ಯಶಸ್ವಿ ನಂತರ 2024ಕ್ಕೆ ಚಂದ್ರನ ಮೇಲಿನ ಮಣ್ಣಿನ ಮಾದರಿ ತರುವುದು ಹಾಗೂ ೨೦೨೫-೨೬ ಕ್ಕೆ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳಿಸುವುದು ಅಲ್ಲದೆ ೨೦೩೫ ಕ್ಕೆ ಭಾರತದ ಸ್ವತಂತ್ರ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ ೨೦೪೦ಕ್ಕೆ ಚಂದ್ರನ ಮೇಲೆ ಭಾರತೀಯರನ್ನು ಇಳಿಸಿ ಸುರಕ್ಷಿತವಾಗಿ ಕರೆತರಲಿದ್ದೆವೆ. ಈ ನಿಟ್ಟಿನಲ್ಲಿ ಇಸ್ರೋದ ೧,೭೫೦೦ ಸಿಬ್ಬಂದಿ ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗಾಗಲೆ ಸೂರ್ಯನ ಎಲ್.೧ ಪಾಯಿಂಟ್‌ನ್ನು ನಾವು ಜನವರಿಯಲ್ಲಿಯೇ ತಲುಪಿದ್ದೇವೆ. ಈ ಮೈಲುಗಲ್ಲು ಪ್ರತಿ ಭಾರತೀಯನು ಹೆಮ್ಮೆಪಡುವ ವಿಷಯವಾಗಿದೆ. ಭಾರತ ನಾಲ್ಕೆನೇ ದೇಶವಾಗಿದೆ. ೪೮೦೦ಕ್ಕೂ ಹೆಚ್ಚು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಸೇವೆ ನೀಡುತ್ತಿವೆ. ಈ ಉಪಗ್ರಹಗಳ ಸಹಾಯದಿಂದ ಆಹಾರ ಭದ್ರತೆ, ನೀರಿನ ಭದ್ರತೆ, ದೇಶದ ತಾಪಮಾನಗಳನ್ನು, ದೇಶದ ಸಮಗ್ರ ಬೆಳವಣಿಗೆಗೆ ತನ್ನದೆಯಾದ ಕೊಡುಗೆ ನೀಡಿವೆ ಎಂದರು.