ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ: ೨೦ ಜನರಿಗೆ ಗಾಯ

Advertisement

ಚಿಕ್ಕಮಗಳೂರು: ಎರಡು ಕೆ ಎಸ್ ಆರ್ ಟಿ ಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮೂಡಿಗೆರೆ ಸಮೀಪದ ಮಾಕೋಹಳ್ಳಿ ಸಮೀಪ ಭಾನುವಾರ ನಡೆದಿದೆ.

ಮೂಡಿಗೆರೆಯಿಂದ ಬೇಲೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಮತ್ತು ಬೇಲೂರಿನಿಂದ ಮೂಡಿಗೆರೆಗೆ ಬರುತ್ತಿದ್ದ ಸಾರಿಗೆ ಬಸ್ ಗಳ ನಡುವೆ ಮಾಕೋನಹಳ್ಳಿ – ಘಟ್ಟದಹಳ್ಳಿ ನಡುವಿನ ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ.

ಎರಡು ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಮತ್ತು ಆಂಬುಲೆನ್ಸ್‌ ಚಾಲಕರ ಸಹಾಯದಿಂದ ಗಾಯಾಳುಗಳನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಲ್ಲಿ ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಅವರನ್ನು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೇಲೂರಿನಿಂದ ಗೆಂಡೇಹಳ್ಳಿ ಮೂಲಕ ಬರುತ್ತಿದ್ದ ಸಾರಿಗೆ ಬಸ್ ಮತ್ತು ಮೂಡಿಗೆರೆಯಿಂದ ಬೇಲೂರಿಗೆ ಸಾಗುತ್ತಿದ್ದ ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಕಿರಿದಾದ ರಸ್ತೆ ಮತ್ತು ತಿರುವಿನ ಕಾರಣ ಈ ಅಪಘಾತ ಸಂಭವಿಸಿದೆ. ಎರಡು ಬಸ್ ಗಳು ಹಾನಿಗೀಡಾಗಿದ್ದು, ಮುಂಭಾಗದ ಗ್ಲಾಸ್ ಒಡೆದಿದೆ.