ರೈಲ್ವೆ ಇಲಾಖೆ ಭೂ ವಿವಾದ ಸ್ವತಂತ್ರ ತನಿಖೆಗೆ ಒತ್ತಾಯ

Advertisement

ಧಾರವಾಡ: ಹುಬ್ಬಳ್ಳಿಯ ರೈಲ್ವೆ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ ಭೂಮಿ ನೀಡುವ ವಿಚಾರದ ಕುರಿತು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈಲ್ವೆ ಇಲಾಖೆಗೆ ಸಂಬಂಧಿಸಿದ ೧೩ ಎಕರೆ ಭೂಮಿಯನ್ನು ಕೇವಲ ೮೩ ಕೋಟಿಗೆ ಖಾಸಗಿ ಡೆವಲರ‍್ಸ್ಗೆ ನೀಡುತ್ತಿರುವ ವಿಷಯ ಮಾಧ್ಯಮಗಳ ಮೂಲಕ ಬಹಿರಂಗಗೊಳ್ಳುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಇಲಾಖೆ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಭೂಮಿಯನ್ನು ಖಾಸಗಿಯವರಿಗೆ ಕೊಡಿಸುವ ವಿಚಾರದಲ್ಲಿ ಹುಬ್ಬಳ್ಳಿಯ ಪ್ರಭಾವಶಾಲಿ ಜನರ ಕೈವಾಡವಿದೆ ಎನ್ನುವುದನ್ನು ಅಲ್ಲಗಳೆಯಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಇದರ ಅಧ್ಯಕ್ಷ ಬ್ರಿಜ್ ಮೋಹನ್ ಅಗರವಾಲ್ ಅವರು ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜನತಂತ್ರ ಮತ್ತು ಚುನಾವಣಾ ಸುಧಾರಣೆಯ ರಾಷ್ಟ್ರೀಯ ಆಂದೋಲನದ ಭಾಗವಾಗಿ ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ಎಲೆಕ್ಟ್ರೋಲ್ ಬಾಂಡು ಹಗರಣಗಳ ಕುರಿತಂತೆ ಹೋರಾಟ ನಡೆಸಲು ಮುಂದಾಗಿದ್ದು, ಪ್ರಧಾನ ಮೋದಿ ಸರಕಾರ ಚುನಾವಣಾ ಆಯೋಗವನ್ನು ಕಾರ್ಯಾಂಗದ ಕೈಗೊಂಬೆಯನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ಅವರು ಸರ್ವೋಚ್ಛ ನ್ಯಾಯಾಲಯದ ಚಾರಿತ್ರಿಕ ನಿರ್ಣಯದ ವಿರುದ್ಧ ತೆರಳುತ್ತಿದ್ದು, ಇದನ್ನು ಕೂಡಲೇ ಕೈಬಿಡಬೇಕು. ಇದಕ್ಕಾಗಿಯೇ ದೇಶಾದ್ಯಂತ ಚಳವಳಿ ಪ್ರಾರಂಭಿಸಲಾಗುತ್ತಿದ್ದು, ಜನರಿಗೆ ಇದರ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಮುಖ್ಯ ಚುನಾವಣಾಧಿಕಾರಿ ನೇಮಕ ವಿಚಾರದಲ್ಲಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿದರೆ ಇದರಿಂದ ಅವರ ಪರವಾಗಿ ಕೆಲಸ ಮಾಡುವವರೇ ಆ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ. ಆ ರೀತಿ ಆಗಬಾರದು. ಈ ಹಿಂದಿನ ಚುನಾವಣೆಯಲ್ಲಿಯೂ ಪಕ್ಷಪಾತದಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಅವರು ಗೆಲುವು ಸಾಧಿಸಿದರು. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳು ನಡೆಯದೇ ಚುನಾವಣೆ ಸ್ವತಂತ್ರವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.